ನಾರಾಯಣಗುರು ತತ್ವಾದರ್ಶಗಳನ್ನು ಸರ್ವರಿಗೂ ತಲುಪಿಸಿ: ಪತ್ರಕರ್ತ ರಾಕೇಶ್ ಕುಂಜೂರು
ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ಧಾರ್ಮಿಕ ಸಭೆ, ಸಮ್ಮಾನ
(Kaup) ಕಾಪು, ಸೆ. 2: ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳನ್ನು ಬಿಲ್ಲವ ಸಮಾಜಕ್ಕೆ ಮಾತ್ರ ಸೀಮಿತಗೊಳಿಸದೆ, ಸಮಸ್ತ ಹಿಂದುಳಿದ ವರ್ಗಗಳ ಜನರಿಗೂ ತಲುಪಿಸುವ ಕಾರ್ಯ ನಡೆಯಬೇಕು ಎಂದು ಜೇಸಿಐ ಪೂರ್ವ ವಲಯಾಧ್ಯಕ್ಷ, ಪತ್ರಕರ್ತ ರಾಕೇಶ್ ಕುಂಜೂರು ಹೇಳಿದರು.
ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ವತಿಯಿಂದ ಗುರುಗಳ 172ನೇ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಸಭೆ, ಸಮ್ಮಾನ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
‘ನಾರಾಯಣಗುರುಗಳ ಚಿಂತನೆ, ತತ್ವಾದರ್ಶಗಳು ಮತ್ತು ಯುವಜನರ ಪಾತ್ರ’ವಿಷಯದ ಕುರಿತು ಮಾತನಾಡಿದ ಅವರು, ನಾರಾಯಣ ಗುರುಗಳ ಸಂದೇಶ ಸಾರ್ವಕಾಲಿಕ ಸತ್ಯವಾಗಿದ್ದು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಸಮಾಜದ ಅಭ್ಯುದಯಕ್ಕೂ ಬಳಸಿಕೊಳ್ಳಬೇಕು. ಗುರುಗಳ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಯುವಜನರು ಪ್ರಮುಖ ಪಾತ್ರ ವಹಿಸಬೇಕು ಎಂದರು.
ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷ ಮಹಾಲಿಂಗ ಅಂಚನ್ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಮಾತನಾಡಿ, ಮೂಳೂರು ಬಿಲ್ಲವರ ಸಂಘದ ಸಾಮಾಜಿಕ ಚಟುವಟಿಕೆಗಳನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿಯೂ ಜನರನ್ನು ಒಗ್ಗೂಡಿಸಿ ಇನ್ನಷ್ಟು ಜನೋಪಯೋಗಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವಂತೆ ಹಾರೈಸಿದರು.
ಸಂಘದ ಅಧ್ಯಕ್ಷ ಪ್ರಕಾಶ್ ವಿ. ಅಂಚನ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಅಧ್ಯಕ್ಷ ದಿ. ಸುಭಾಶ್ಚಂದ್ರ ಪೂಜಾರಿ ಸ್ಮರಣಾರ್ಥ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಸಹಕರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಮಮತಾ ಶೆಟ್ಟಿ ಹಾಗೂ ವಿದ್ಯಾರ್ಥಿವೇತನ ಯೋಜನೆಗೆ ಸಹಕರಿಸಿದ ಜಯಕೃಷ್ಣ ಪೂಜಾರಿ ರಾಜಮನೆ, ಸುರೇಂದ್ರ ಪೂಜಾರಿ ತಾರಿಬೆಟ್ಟು ಅವರನ್ನು ಸಮ್ಮಾನಿಸಲಾಯಿತು.
ಸಂಘದ ಮಹಿಳಾ ಮಂಡಳಿ ಅಧ್ಯಕ್ಷೆ ದೀಪಾ ಆರ್. ಕೋಟ್ಯಾನ್, ಕಾರ್ಯದರ್ಶಿ ಜಗದೀಶ್ ಅಮೀನ್, ಕೋಶಾಧಿಕಾರಿ ರಮೇಶ್ ಪೂಜಾರಿ ರಾಜಮನೆ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಸದಸ್ಯ ಸುಕೇಶ್ ಕೆ. ಅಮೀನ್ ಸ್ವಾಗತಿಸಿದರು. ಅತಿಥ್ ಸುವರ್ಣ ಪಾಲಮೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

