ಸಮಾಜಮುಖಿ ಕಾರ್ಯದ ಉದ್ದೇಶದೊಂದಿಗೆ ಹುಲಿವೇಷ ಧರಿಸಿರುವ ವಿದ್ಯಾರ್ಥಿಗಳ ತಂಡ
ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ತಂಡ
(Kaup) ಕಾಪು: ಸಮಾಜಮುಖಿ ಕಾರ್ಯದ ಉದ್ದೇಶದೊಂದಿಗೆ ಹುಲಿವೇಷ ಧರಿಸಿರುವ ವಿದ್ಯಾರ್ಥಿಗಳ ತಂಡವೊಂದು ಗಮನ ಸೆಳೆಯುತ್ತಿದೆ.
ಬಡ ಕುಟುಂಬಗಳು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಸಮಾನ ಮನಸ್ಕ ವಿದ್ಯಾರ್ಥಿಗಳು ಸೇರಿಕೊಂಡು ಈ ತಂಡವನ್ನು ರಚಿಸಿಕೊಂಡಿದ್ದಾರೆ.
ವಿಶೇಷವೆಂದರೆ, ಈ ತಂಡದಲ್ಲಿರುವವರೆಲ್ಲರೂ ವಿದ್ಯಾರ್ಥಿಗಳಾಗಿದ್ದು, ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳೂ ತಂಡದ ಭಾಗವಾಗಿದ್ದಾರೆ.
ಹುಲಿವೇಷದ ಜೊತೆಗೆ ತಾಸೆ, ಡೋಲು ಬಾರಿಸುವ ಕಲೆಯನ್ನೂ ವಿದ್ಯಾರ್ಥಿಗಳೇ ಕಲಿತುಕೊಂಡಿದ್ದು, ತಮ್ಮ ಕಲಾ ಪ್ರದರ್ಶನದ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ಸಂಗ್ರಹವಾಗುವ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವ ಸಂಕಲ್ಪದೊಂದಿಗೆ ತಂಡ ಮುನ್ನಡೆಯುತ್ತಿದೆ.
ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ಭಜನಾ ಮಂಡಳಿ ಹಾಗೂ ಊರಿನ ಹಿರಿಯರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಸುಜಲ್ ಪೂಜಾರಿ ನೇತೃತ್ವದಲ್ಲಿ ಈ ಯುವಕರ ತಂಡ ರೂಪುಗೊಂಡಿದೆ.
ನಗರ ಸಂಚಾರಕ್ಕೆ ತೆರಳುವ ಮುನ್ನ ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಊದು ಪೂಜೆ ನೆರವೇರಿಸಲಾಯಿತು.
ಬಳಿಕ ತಂಡವು ನಗರ ಸಂಚಾರಕ್ಕೆ ಹೊರಟಿದ್ದು, ಎರಡು ದಿನಗಳ ಕಾಲ ಹುಲಿವೇಷ ಪ್ರದರ್ಶನ ನಡೆಸಲಿದೆ. ಶಾಲಾ-ಕಾಲೇಜಿನ ಪಠ್ಯದ ಜತೆಗೆ ಸಮಾಜದ ಬಗ್ಗೆ ಕಾಳಜಿ ಹೊಂದಿ, ತಮ್ಮಿಂದಾದ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಿರುವ ಈ ವಿದ್ಯಾರ್ಥಿಗಳ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವಿ ಉಪಾಧ್ಯಾಯ, ಅರ್ಚಕ ಲಕ್ಷ್ಮೀಶ್ ಭಟ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜನಾರ್ಧನ ಆಚಾರ್ಯ, ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ನಾಯ್ಕ್, ಕರಂದಾಡಿ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಅವಿನಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ತ್ರಿವಿಕ್ರಂ ಭಟ್, ವಿಶ್ವನಾಥ್ ಮೂಲ್ಯ, ಮಾರ್ಗದರ್ಶಕರಾದ ಸದಾನಂದ ಪೂಜಾರಿ, ರವಿ ನಾಯ್ಕ್, ಹರೀಶ್ ಆಚಾರ್ಯ, ಸುಧಾಕರ ಆಚಾರ್ಯ, ಮನೋಜ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

