ರಂಗ ಬಾಂಧವ್ಯದಿಂದ ವಿನೂತನ ಅನುಭವದ ಪ್ರಾಪ್ತಿ : ಜಯಕರ್ ಶೆಟ್ಟಿ ಇಂದ್ರಾಳಿ
ಜಗನ್ನಾಥ ಸಭಾಭವನದಲ್ಲಿ ಸುಮನಸಾ ಕೊಡವೂರು ರಜತ ಸಂಭ್ರಮದ ಪ್ರಯುಕ್ತ ನಡೆದ ಕಾರ್ಯಕ್ರಮ
(Udupi) ಉಡುಪಿ : ರಂಗಚಟುವಟಿಕೆಗಳ ನಿರಂತರೆಯಿಂದ ರಂಗಭೂಮಿ ಸದೃಢ ಮತ್ತು ವಿಸ್ತಾರಗೊಳ್ಳುತ್ತದೆ. ಇಲ್ಲಿ ಪರಸ್ಪರ ಬಾಂಧವ್ಯವನ್ನಿರಿಸಿಕೊಂಡಾಗ ಅನುಭವ, ಕಲಿಕೆಯ ಹೊಸ ಸಾಧ್ಯತೆಗಳು ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು.
ಅವರು ಉಡುಪಿ ಜಗನ್ನಾಥ ಸಭಾಭವನದಲ್ಲಿ ಸುಮನಸಾ ಕೊಡವೂರು ರಜತ ಸಂಭ್ರಮ ಸಲುವಾಗಿ ಹಮ್ಮಿಕೊಂಡ ರಂಗತಂಡಗಳ ಮತ್ತು ರಂಗ ಕಲಾವಿದರ ಸ್ನೇಹ ಸಮ್ಮಿಲನ ಕಾರ್ಯಕ್ರಮ ರಂಗ ಸಾರೂಪ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಳೆ ಬೇರು ಹೊಸ ಚಿಗುರು ಮಾದರಿಯಲ್ಲಿ ತಾವು ಬೆಳೆಯುವುದರೊಂದಿಗೆ ಇತರರನ್ನೂ ಬೆಳೆಸುತ್ತಿರುವ ಸುಮನಸಾ ಎಲ್ಲರನ್ನು ಜೊತೆಗೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಮಾದರಿಯಾದದ್ದು. ಸದಾ ವೈಶಿಷ್ಟ್ಯತೆಗೆ ಹೆಸರುವಾಸಿಯಾದ ಸಂಸ್ಥೆಯ ರಜತ ಸಂಭ್ರಮ ವರ್ಷ ಅವಿಸ್ಮರಣೀಯವಾಗಲಿ ಎಂದು ಹಾರೈಸಿದರು.
‘ಮುಷ್ಟಿಯಿಂದ ಸಮಷ್ಟಿಗೊಂಡ ರಂಗಸಾರೂಪ್ಯ…’
‘ತರತರಹ ಆಕಾರದ ಬೆರಳು ಮುಷ್ಟಿಯಾಗಿ ಒಗ್ಗಟ್ಟಿನ ಸೃಷ್ಟಿಯೆನಿಸಿದರೆ ಅದರ ಜೊತೆ ಸೇರುವ ಕೈಗಳು ಸಾಮೂಹಿಕ ಸಮಭಾವದ ಸಮಷ್ಟಿಯಾಗುವ ಮಹದಾಶಯದ ಸಾಮ್ಯತೆಯ ಸಂಕಲ್ಪವೇ ಸುಮನಸಾ ರಂಗಸಾರೂಪ್ಯ’ ಎನ್ನುವ ವಿಶೇಷ ಪರಿಕಲ್ಪನೆಯನ್ನು ಉದ್ಘಾಟಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ ರಜತಸಂಭ್ರಮದ ಅಧ್ಯಕ್ಷರಾದ ಹರಿಪ್ರಸಾದ್ ರೈ ಮಾತನಾಡಿ, ಉಡುಪಿಯ ಸಾಂಸ್ಕೃತಿಕ ಉನ್ನತಿಗೆ ಸುಮನಸಾದ ಕೊಡುಗೆ ಅನನ್ಯವಾದುದು. ರಂಗಭೂಮಿ ನಿಂತ ನೀರಾಗಬಾರದೆನ್ನುವ ನಿಟ್ಟಿನಲ್ಲಿ ಹೊಸ ಅಲೋಚನೆಗಳೊಂದಿಗೆ ಭವಿಷ್ಯಕ್ಕೆ ಪೂರಕವಾದ ಕಾರ್ಯಕ್ರಮಗಳು ಸುಮನಸಾದ ಮೂಲಕ ಜರಗುತ್ತಿರುವುದು ಶ್ಲಾಘನೀಯ ಎಂದರು.
ಸಭಾ ವೇದಿಕೆಯಲ್ಲಿ ರಜತ ಸಂಭ್ರಮದ ಉಪಾಧ್ಯಕ್ಷ ದಿವಾಕರ್ ಸನಿಲ್, ಮಹಮ್ಮದ್ ಮೌಲಾ, ಸಲಹೆಗಾರಾದ ಸುಕನ್ಯಾ ಮಾರ್ಟಿಸ್, ಡಾ. ಸುನಿತಾ ವಿ, ಸುಮನಸಾ ಸಂಚಾಲಕರ ಭಾಸ್ಕರ್ ಪಾಲನ್ ಬಾಚನಬೈಲು, ಗೌರವಾಧ್ಯಕ್ಷ ಎಂ.ಎಸ್.ಭಟ್, ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಕಾರ್ಯಕ್ರಮ ಸಂಯೋಜಕ ದಿವಾಕರ್ ಕಟೀಲ್, ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಜರ್ನಿ ಥಿಯೇಟರ್ ಮಂಗಳೂರು ತಂಡದವರಿಂದ ರಂಗಸಂಗೀತ ಹಾಗೂ ಸಭಾ ಕಾರ್ಯಕ್ರಮದ ನಂತರ ಸುಮನಸಾ ಕಲಾವಿದರಿಂದ ರಂಗಸಂಗೀತ ನೆರವೇರಿತು.
ರಂಗ ಕರ್ಮಿಗಳಾದ ನಾಗೇಶ್ ಉದ್ಯಾವರ, ರಾಮ್ ಶೆಟ್ಟಿ ಹಾರಾಡಿ, ಸಂತೋಷ್ ನಾಯಕ್ ಪಟ್ಲ, ಸಂತೋಷ್ ಕುಮಾರ್ ಶೆಟ್ಟಿ ಹಿರಿಯಡ್ಕ, ರಾಜಗೋಪಾಲ್ ಶೇಟ್, ಗಂಗಾದರ್ ಕಿದಿಯೂರು, ರವಿ ಕುಮಾರ್ ಕಡೆಕಾರ್, ಎಂಎಸ್ ಭಟ್ ಹಾಗೂ ಇನ್ನಿತರ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ದಯಾನಂದ ಕರ್ಕೇರ ಪ್ರಸ್ತಾವಿಕ ಮಾತನ್ನಾಡಿದರು, ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

