ಚಿಕ್ಕಬಳ್ಳಾಪುರ : ಆಳವಾದ ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ
ಕಡಶಿಗೆನಹಳ್ಳಿ ಗ್ರಾಮದ ಕೃಷ್ಣಮ್ಮರವರಿಗೆ ಸೇರಿದ ಅಂದಾಜು 30×30 ಅಡಿ ವಿಸ್ತಾರದ ಬಾವಿ
(Chikkaballapura) ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಕಡಶಿಗೆನಹಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ನಾಯಿಯೊಂದನ್ನು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸಾಹಸದಿಂದ ಜೀವಂತವಾಗಿ ರಕ್ಷಿಸಿರುವ ಘಟನೆ ವರದಿಯಾಗಿದೆ.
ಕಡಶಿಗೆನಹಳ್ಳಿ ಗ್ರಾಮದ ಕೃಷ್ಣಮ್ಮ ಎಂಬುವರ ಜಮೀನಿನಲ್ಲಿರುವ ಅಂದಾಜು 30×30 ಅಡಿ ವಿಸ್ತಾರ ಹಾಗೂ 30 ಅಡಿ ಆಳದ ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ನಾಯಿಯೊಂದು ಬಿದ್ದಿತ್ತು. ಬಾವಿಯಲ್ಲಿ ನೀರಿಲ್ಲದಿದ್ದರೂ ಆಳ ಹೆಚ್ಚಾಗಿದ್ದರಿಂದ ಪ್ರಾಣ ರಕ್ಷಣೆಗಾಗಿ ನಾಯಿಯು ಒದ್ದಾಡುತ್ತಾ ಅಳಲು ತೋಡಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ತಕ್ಷಣವೇ ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಯ ನಿಯಂತ್ರಣ ಕೊಠಡಿಗೆ ದೂರವಾಣಿ ಮೂಲಕ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಮಾಹಿತಿ ತಕ್ಷಣವೇ ಎಚ್ಚೆತ್ತ ಅಗ್ನಿಶಾಮಕ ತಂಡವು ಜಲವಾಹನದೊಂದಿಗೆ ಕೂಡಲೇ ಸ್ಥಳಕ್ಕೆ ಧಾವಿಸಿತು. ಸ್ಥಳದಲ್ಲಿ ಕಾರ್ಯಾಚರಣೆಗೆಳಿಗೊಂಡ ಸಿಬ್ಬಂದಿ, ಸುಮಾರು 1 ಗಂಟೆ 30 ನಿಮಿಷಗಳ ಕಾಲ ತೀವ್ರ ಶ್ರಮ ವಹಿಸಿದರು. ಹಗ್ಗ ಹಾಗೂ ಬಲೆಗಳ ಸಹಾಯದಿಂದ ಬಾವಿಯೊಳಗೆ ಇಳಿದು, ಯಾವುದೇ ಅಪಾಯವಾಗದಂತೆ ಎಚ್ಚರಿಕೆಯಿಂದ ನಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆೆತ್ತಿ ಜೀವದಾನ ಮಾಡಿದರು.
ಅಗ್ನಿಶಾಮಕ ಸಿಬ್ಬಂದಿಯ ಈ ತ್ವರಿತ ಸ್ಪಂದನೆ ಹಾಗೂ ಸಮಯಪ್ರಜ್ಞೆಯನ್ನು ಕಡಶಿಗೆನಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಶ್ಲಾಘನೀಯ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಪ್ರಮುಖರಾದ ರವೀಂದ್ರ ಸಂಗಮ ಅವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಮಡಿವಾಳರ ಬಸವರಾಜ, ರಾಜು ಮುರಕುಟ್ಟಿ, ದತ್ತಾತ್ರೇಯ ಹಾಗೂ ಬೋರಗಾವಿ ಅವರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

