ಸಂಸ್ಕೃತದ ಅಧ್ಯಯನ ನಮ್ಮ ಆದ್ಯ ಕರ್ತವ್ಯ – ಪರ್ಯಾಯ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು
ಇಹಲೋಕ ಮತ್ತು ಪರಲೋಕ ಎರಡಕ್ಕೂ ಸಂಸ್ಕೃತದಿಂದ ಉಪಯೋಗ : ವಿದ್ಯಾಸಾಗರ ತೀರ್ಥ ಶ್ರೀಪಾದರು
(Udupi) ಉಡುಪಿ: ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜಿನ 122ನೇ ವರ್ಧಂತ್ಯುತ್ಸವ ಮತ್ತು ಸಂಸ್ಕೃತೋತ್ಸವ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಶೀರೂರು ಮಠದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ‘ಸಂಸ್ಕೃತದ ಅಧ್ಯಯನ ನಮ್ಮ ಆದ್ಯ ಕರ್ತವ್ಯ. ಕೇವಲ ಪ್ರಮಾಣಪತ್ರವನ್ನು ಪಡೆಯುವ ದೃಷ್ಟಿಯಿಂದ ಅಧ್ಯಯನ ಮಾಡಬಾರದು. ಕಲಿತ ವಿದ್ಯೆಯನ್ನು ಇನ್ನಷ್ಟು ಜನರಿಗೆ ಹಂಚಬೇಕು. ಇದೂ ದೇವರಿಗೆ ಮಾಡುವ ಸೇವೆ’ ಎಂದು ಹಿತವನ್ನು ಬೋಧಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿನಯಚಂದ್ರ ಬನವತಿ ಅವರು ಮಾತನಾಡುತ್ತಾ ಯಾವುದೇ ವಿದ್ಯೆಯನ್ನು ಅಧ್ಯಯನ ಮಾಡುವುದಾದರೂ ಅದರಲ್ಲಿ ಶೇಕಡಾ ಐದರಷ್ಟು ಭಾರತೀಯ ಜ್ಞಾನ ಪರಂಪರೆಗೆ ಸಂಬಂಧಿಸಿದ ವಿಚಾರವನ್ನು ಕಲಿಸುವ ಅವಕಾಶ ಇರಬೇಕು. ಅನಾರೋಗ್ಯವೇ ಮೊದಲಾದ ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಭಾರತೀಯ ಜ್ಞಾನ ಪರಂಪರೆಯಲ್ಲಿ ಏನು ಉತ್ತರ ಸಿಗಬಹುದೆಂದು ಕಂಡುಹುಡುಕಬೇಕು ಎಂದರು.
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ‘ಇಹಲೋಕ ಮತ್ತು ಪರಲೋಕ ಎರಡಕ್ಕೂ ಸಂಬಂಧಿಸಿದ ಪ್ರಯೋಜನ ಸಂಸ್ಕೃತಭಾಷೆಯಿಂದ ಸಿಗುತ್ತದೆ. ವೇದಾಂತವಿದ್ಯೆಯ ಅಧ್ಯಯನ ಹೆಚ್ಚು ಹೆಚ್ಚು ನಡೆಯಬೇಕು’ ಎಂದು ಅನುಗ್ರಹ ಸಂದೇಶವನ್ನು ನೀಡಿದರು.
ಎಸ್.ಎಮ್.ಎಸ್.ಪಿ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯೆಯಾಗಿ ಸೇವೆಸಲ್ಲಿಸಿ ನಿವೃತ್ತರಾಗುತ್ತಿರುವ ಶ್ರೀಮತಿ ಪುಷ್ಪಲತಾ ಎಮ್ ಅವರನ್ನು ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದ ಕಾಲೇಜಿನ ಉಪನ್ಯಾಸಕರಾದ ಡಾ. ಅಜಿತ ಕುಮಾರ ಆಚಾರ್ಯ ಪಿ ಇವರನ್ನು ಸಮ್ಮಾನಿಸಲಾಯಿತು.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಆಚಾರ್ಯ ತರಗತಿಯ ಅಧ್ಯಯನವನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ವಿದ್ವತ್ ಶಾಲನ್ನು ನೀಡಿ ಅನುಗ್ರಹಿಸಲಾಯಿತು.
ವೇದಿಕೆಯಲ್ಲಿ ಎಸ್.ಎಮ್.ಎಸ್. ಪಿ. ಸಭೆಯ ಕಾರ್ಯದರ್ಶಿ ವಿದ್ವಾನ್ ಗೋಪಾಲಕೃಷ್ಣ ಜೋಯಿಸ್, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ಉಪಸ್ಥಿತರಿದ್ದರು.
ಪ್ರಾಚಾರ್ಯ ಪ್ರೊ. ಡಿ. ಎಸ್. ಅಮೃತೇಶ ಆಚಾರ್ಯ ಸ್ವಾಗತಿಸದರು. ಪ್ರೊ. ಸತ್ಯನಾರಾಯಣ ವಿ. ರಾವ್ ಅವರು ವಂದಿಸಿದರು. ಡಾ. ಮಹೇಶ ಭಟ್ಟ ಆರ್. ಹಾರ್ಯಾಡಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಾದ ಪ್ರಹ್ಲಾದ, ಸೀತಾರಾಮ ಬನ್ನಿಂತಾಯ, ನಿತಿನ್, ಆದಿತ್ಯಕೃಷ್ಣ, ಪ್ರಹ್ಲಾದಮೂರ್ತಿ ವೇದಘೋಷವನ್ನು ಮಾಡಿದರು.

