ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 54ನೇ ಸರಣಿ ಕಾರ್ಯಕ್ರಮ
ಕೃಷಿ ಭೂಮಿ ಹಡಿಲು ಬಿಡಬೇಡಿ –ಜಯರಾಮ ಶೆಟ್ಟಿ
(Kata) ಕೋಟ: ಕೃಷಿ ಭೂಮಿ ಬಂಜೆಯಲ್ಲ. ಅದನ್ನು ಹಡಿಲು ಬೀಳಲು ಬಿಡಬೇಡಿ ಎಂದು ಕೋಟ ರೈತ ಧ್ವನಿ ಸಂಘಟನೆಯ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ರೈತ ಸಮುದಾಯಕ್ಕೆ ಮನವಿ ಮಾಡಿದರು.
ಕೋಟ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಸಂಘಟನೆಗಳ ಸಹಯೋಗದೊಂದಿಗೆ 54 ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಕೃಷಿಯಿಂದ ಹೆಚ್ಚಿನವರು ವಿಮುಖರಾಗುತ್ತಿರುವ ಮಾಹಿತಿಗಳು ಕೇಳಿ ಬರುತ್ತಿವೆ. ಇದು ಸಲ್ಲದು. ಬದಲಾಗಿ ಇನ್ನು ಮುಂದಿನ ದಿನಗಳಲ್ಲಿ ಕೃಷಿ ಇದ್ದವರಲ್ಲಿ ಶ್ರೀಮಂತಿಕೆ ಉಳಿಯಲಿದೆ. ಪ್ರತಿಯೊಬ್ಬರೂ ಕೃಷಿ ಭೂಮಿ ಹಡಿಲು ಬೀಳಿಸಿದರೆ ಮುಂದೆ ಬಾರಿ ಸಂಕಷ್ಟವನ್ನು ಎದುರಿಸಬೇಕಾದಿತು. ಕೃಷಿ ಭೂಮಿ ಯಾವತ್ತೂ ಬಂಜೆಯಾಗಲು ಸಾಧ್ಯವಿಲ್ಲ. ಕೃಷಿಯಲ್ಲಿ ಸಮಗ್ರ ಕೃಷಿ ನೀತಿ ಅನುಸರಿಸಿ ಯಶಸ್ಸು ಖಂಡಿತಾ ದೊರಕಲಿದೆ.
ಪಂಚವರ್ಣ ರೈತರೆಡೆಗೆ ರೈತಸಮುದಾಯಕ್ಕೆ ಶಕ್ತಿ ನೀಡುತ್ತಿದ್ದು, ಯುವ ಸಮೂಹ ಕೃಷಿಯತ್ತ ಆಕರ್ಷಿಸಲಿ ಎಂದು ರೈತ ಪುರಸ್ಕಾರ ಪಡೆದ ಚಂದ್ರಕಾಂತ್ ಮಧ್ಯಸ್ಥರಿಗೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಯುವ ಕೃಷಿಕ ಮಣೂರು ಬಾಳೆಬೆಟ್ಟು ಚಂದ್ರಕಾಂತ್ ಮಧ್ಯಸ್ಥ ಇವರಿಗೆ ಕೃಷಿ ಪರಿಜರವನ್ನಿತ್ತು ಪಂಚವರ್ಣ ರೈತ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪರಿಸರ ಸ್ನೇಹಿ ಪಾರಿಜಾತ ಗಿಡ ನೆಟ್ಟು ಗೋ ಪೂಜೆ ನೆರವೇರಿಸಲಾಯಿತು.
ಸಭಾಧ್ಯಕ್ಷತೆಯನ್ನು ಪಂಚವರ್ಣ ಸಂಘಟನೆಯ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಎಂ. ಎನ್ ಮಧ್ಯಸ್ಥ ಅಭಿನಂದನಾ ಮಾತುಗಳನ್ನಾಡಿದರು.
ಮಣೂರು ಮಹಾಲಿಂಗೇಶ್ವರ ಸಭಾಂಗಣದ ಮುಖ್ಯಸ್ಥ ರಾಜೇಂದ್ರ ಉರಾಳ ಸನ್ಮಾನಿತರ ಪರವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸ್ನೇಹಕೂಟದ ನಿರ್ದೇಶಕ ವಿಷ್ಣುಮೂರ್ತಿ ಮಯ್ಯ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಸ್ನೇಹಕೂಟದ ಅಧ್ಯಕ್ಷೆ ಭಾರತಿ ವಿ ಮಯ್ಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಸನ್ಮಾನ ಪತ್ರವನ್ನು ಸ್ನೇಹಕೂಟದ ವಿನಯ ಉಡುಪ ವಾಚಿಸಿದರು.
ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ, ವಂದಿಸಿದರು.
ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

