ಹೆಬ್ರಿಯ ಚಾಣಕ್ಯ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಚೆಸ್ ತರಗತಿ ಉದ್ಘಾಟನೆ
ಚೆಸ್ ತರಗತಿ ಉದ್ಘಾಟಿಸಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ
(Hebri) ಹೆಬ್ರಿ : ಚೆಸ್ ಆಟವು ವಿದ್ಯಾರ್ಥಿಗಳ ಏಕಾಗ್ರತೆ, ತಾರ್ಕಿಕ ಚಿಂತನೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಕಳೆದ 7 ವರ್ಷಗಳಿಂದ ಉಚಿತ ಚೆಸ್ ತರಬೇತಿಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ ಹೇಳಿದರು.
ಅವರು ಹೆಬ್ರಿ ಎಸ್. ಆರ್. ಸ್ಕೂಲ್ ಬಳಿಯ ಗುರುಕೃಪಾ ಬಿಲ್ಡಿಂಗ್ನಲ್ಲಿರುವ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಉಚಿತ ಚೆಸ್ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ಕಳೆದ 12 ವರ್ಷಗಳಿಂದ ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ತರಬೇತಿಗಳನ್ನು ನೀಡುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಯಕ್ಷಗಾನ, ಕರಾಟೆ, ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಭರತನಾಟ್ಯ, ಫಿಲಂ ಡ್ಯಾನ್ಸ್, ಕೀಬೋರ್ಡ್, ತಬಲಾ, ಕೊಳಲು ಮೊದಲಾದ ತರಗತಿಯನ್ನು ನೀಡಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳಿಗೆ ಇಂತಹ ತರಬೇತಿ ನೀಡುವುದರ ಮೂಲಕ ಪ್ರೋತ್ಸಾಹಿಸಿದರೆ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ ಎಂದರು.
ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಆರು ವರ್ಷಗಳ ಕಾಲ ಉಚಿತ ಚಿತ್ರಕಲಾ ತರಗತಿಯನ್ನು ನೀಡಿದ್ದು ಕಳೆದ 7 ವರ್ಷಗಳಿಂದ ಉಚಿತ ಚೆಸ್ ತರಗತಿಯನ್ನು ನೀಡಲಾಗುತ್ತಿದೆ. ಪ್ರತಿ ಭಾನುವಾರ ಬೆಳಿಗ್ಗೆ 8:30 ರಿಂದ 9:30 ತನಕ ತರಗತಿ ನಡೆಯಲಿದ್ದು ಸೀಮಿತ ಪ್ರವೇಶಾತಿಗೆ ಅವಕಾಶವಿದ್ದು, ಕೂಡಲೇ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದರು.
ಸಮಾರಂಭದಲ್ಲಿ ಚಾಣಕ್ಯ ಚಿತ್ರಕಲಾ ಕೇಂದ್ರದ ಶಿಕ್ಷಕ ರಾಧಾಕೃಷ್ಣ, ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

