• Home  
  • ಪಡುಬಿದ್ರಿ: ಜೈಹಿಂದ್ ಟ್ಯೂಬ್ಸ್ ಕಂಪೆನಿ  ಹೊರ ಸೂಸುವ  ಹೊಗೆಯಿಂದ ತೊಂದರೆ, ಸಾರ್ವಜನಿಕರ ಆಕ್ರೋಶ (Padubidri: Public outrage due to smoke emitted by Jaihind Tubes Company)
- PROBLEMS

ಪಡುಬಿದ್ರಿ: ಜೈಹಿಂದ್ ಟ್ಯೂಬ್ಸ್ ಕಂಪೆನಿ  ಹೊರ ಸೂಸುವ  ಹೊಗೆಯಿಂದ ತೊಂದರೆ, ಸಾರ್ವಜನಿಕರ ಆಕ್ರೋಶ (Padubidri: Public outrage due to smoke emitted by Jaihind Tubes Company)

Share: ಪಡುಬಿದ್ರಿ: ಜೈಹಿಂದ್ ಟ್ಯೂಬ್ಸ್ ಕಂಪೆನಿ  ಹೊರ ಸೂಸುವ  ಹೊಗೆಯಿಂದ ತೊಂದರೆ, ಸಾರ್ವಜನಿಕರ ಆಕ್ರೋಶ ಹೆಜಮಾಡಿ ಹಾಗೂ ನಡ್ಸಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಂದ ಅಧಿಕಾರಿಗಳಿಗೆ ದೂರು (Padubidri) ಪಡುಬಿದ್ರಿ: ಸುಜ್ಲಾನ್ ಎಸ್‌ಇಝೆಡ್ ಕೈಗಾರಿಕಾ ಪ್ರದೇಶದಲ್ಲಿರುವ ಜೈಹಿಂದ್ ಟ್ಯೂಬ್ಸ್ ಕಂಪೆನಿಯಿಂದ ಹೊರಸೂಸಲಾಗುತ್ತಿದೆ ಎನ್ನಲಾದ ಹೊಗೆ ಹಾಗೂ ಮಾಲಿನ್ಯದಿಂದ ಸ್ಥಳೀಯರ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಆರೋಪಿಸಿ, ಹೆಜಮಾಡಿ ಹಾಗೂ ನಡ್ಸಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಶೀಘ್ರ […]

(Padubidri) ಪಡುಬಿದ್ರಿ: ಸುಜ್ಲಾನ್ ಎಸ್‌ಇಝೆಡ್ ಕೈಗಾರಿಕಾ ಪ್ರದೇಶದಲ್ಲಿರುವ ಜೈಹಿಂದ್ ಟ್ಯೂಬ್ಸ್ ಕಂಪೆನಿಯಿಂದ ಹೊರಸೂಸಲಾಗುತ್ತಿದೆ ಎನ್ನಲಾದ ಹೊಗೆ ಹಾಗೂ ಮಾಲಿನ್ಯದಿಂದ ಸ್ಥಳೀಯರ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಆರೋಪಿಸಿ, ಹೆಜಮಾಡಿ ಹಾಗೂ ನಡ್ಸಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

  ಸ್ಥಳೀಯರ ಪ್ರಕಾರ, ಕಂಪೆನಿಯಿಂದ ಹೊರ ಹೊಮ್ಮುವ ದಟ್ಟ ಹೊಗೆ ಮಂಜಿನಂತೆ ಪ್ರದೇಶವನ್ನು ಆವರಿಸುವ ಸಂದರ್ಭಗಳಲ್ಲಿ ಉಸಿರಾಟದ ತೊಂದರೆ, ನಿರಂತರ ಕೆಮ್ಮು, ಕಣ್ಣು ಮತ್ತು ಚರ್ಮದ ಉರಿ, ತುರಿಕೆ ಹಾಗೂ ಅಸ್ತಮಾದಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಪರಿಸರದ ಮೇಲೂ ದುಷ್ಪರಿಣಾಮ ಉಂಟಾಗಿದ್ದು, ನೂರಾರು ತೆಂಗಿನ ಮರಗಳ ಗರಿಗಳು ಮಳೆಗಾಲದಲ್ಲಿಯೂ ಹಳದಿ ಬಣ್ಣಕ್ಕೆ ತಿರುಗಿವೆ. ಹೊಗೆಯಿಂದ ಸುತ್ತಮುತ್ತಲಿನ 100ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

  ಸ್ಥಳೀಯ ಹಿರಿಯ ನಾಗರಿಕ ಅಬ್ದುಲ್ ಖಾದರ್ ಮಾತನಾಡಿ, “ಕಂಪೆನಿಯ ಕಾರ್ಯಾಚರಣೆ ಆರಂಭವಾದ ಬಳಿಕ ನಿತ್ಯ ಒಂದಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ರಾತ್ರಿ ವೇಳೆ ಹೊರಬಿಡುವ ಹೊಗೆಯಿಂದ ಕಣ್ಣು ಉರಿ, ಉಸಿರಾಟದ ತೊಂದರೆ, ನಿರಂತರ ಕೆಮ್ಮು, ಮೈಯಲ್ಲಿ ತುರಿಕೆ ಹಾಗೂ ದಮ್ಮಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮನೆಯ ತೆಂಗಿನ ಮರಗಳ ಬಣ್ಣ ಬದಲಾಗಿದ್ದು, ಇಳುವರಿಯೂ ಕಡಿಮೆಯಾಗಿದೆ. ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರೂ ಈ ಸಮಸ್ಯೆ ಅನುಭವಿಸುತ್ತಿದ್ದಾರೆ” ಎಂದು ಆರೋಪಿಸಿದರು.

  ಸ್ಥಳೀಯ ನಿವಾಸಿ ಸುಚೀಂದ್ರ ಬೊಗ್ಗರ್ಲಚ್ಚಿಲ್ ಮಾತನಾಡಿ, “ಕಂಪೆನಿಯಿಂದ ಮಕ್ಕಳಿಗೆ ಹಾಗೂ ವೃದ್ಧರಿಗೆ ಉಸಿರಾಟದ ತೊಂದರೆ ಉಂಟಾಗುತ್ತಿದೆ. ಹೊಗೆ ದಟ್ಟವಾಗುವ ಸಂದರ್ಭಗಳಲ್ಲಿ ನಡ್ಸಾಲು–ಪಲಿಮಾರು–ಹೆಜಮಾಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತದೆ. ಸಮಸ್ಯೆಯನ್ನು ಹಲವು ಬಾರಿ ಕಂಪೆನಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಇದುವರೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ” ಎಂದು ಹೇಳಿದರು.

  ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಮೀಝ್ ಹುಸೈನ್ ಮಾತನಾಡಿ, “ಆರು ತಿಂಗಳೊಳಗೆ ಸಮಸ್ಯೆ ಪರಿಹರಿಸುವುದಾಗಿ ಕಂಪೆನಿ ಭರವಸೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಂಪೆನಿ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.

  ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಶ್ವಿನ್ ಕೋಟ್ಯಾನ್ ಉಪಸ್ಥಿತರಿದ್ದರು.

   ಅಧಿಕಾರಿಗಳಿಗೆ ಮನವಿ

  ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಸ್ಥಳೀಯರು ಸಲ್ಲಿಸಿರುವ ಮನವಿಯಲ್ಲಿ, ಕಂಪೆನಿಯಿಂದ ಹೊರಸೂಸುತ್ತಿರುವ ಹೊಗೆ ಮತ್ತು ಮಾಲಿನ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.

  ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಂಪೆನಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸ್ಥಳೀಯರು ಹೋರಾಟ ನಡೆಸಲು ಮುಂದಾಗುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.