ಉದ್ಯಾವರ ಮಟ್ಟು ಕೊಪ್ಲ ಕಡಲಕಿನಾರೆಯಲ್ಲಿ ಮೀನುಗಾರರಿಂದ ಸಮುದ್ರಪೂಜೆ
ಮೀನುಗಾರಿಕೆಗೆ ತೆರಳುವ ಮುನ್ನ ಸಮುದ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ
(Udyavara) ಉದ್ಯಾವರ: ಉದ್ಯಾವರ ಮಟ್ಟು ಕೊಪ್ಲ ಶ್ರೀರಾಮ ಭಜನಾ ಮಂದಿರದ ನೇತೃತ್ವದಲ್ಲಿ ಈ ಭಾಗದ ಮೀನುಗಾರರು ಸೇರಿಕೊಂಡು ಶುಕ್ರವಾರ ಅರಬ್ಬಿ ಸಮುದ್ರಕ್ಕೆ ಹಾಲು, ಸಿಯಾಳ ಸಮರ್ಪಿಸಿ ಭಕ್ತಿ ಶ್ರದ್ಧೆಯಿಂದ ‘ಸಮುದ್ರ ಪೂಜೆ’ನೆರವೇರಿಸಿದರು.
ಮೀನುಗಾರರೊಂದಿಗೆ ಸ್ಥಳೀಯ ಮಹಿಳೆಯರು ಸೇರಿಕೊಂಡು ವಿಶಾಲ ಸಮುದ್ರಕ್ಕೆ ಹಾಲು, ಅರಶಿನ, ಕುಂಕುಮ, ತೆಂಗಿನಕಾಯಿ, ಫಲ-ತಾಂಬೂಲಗಳನ್ನು ಭಕ್ತಿಪೂರ್ವಕವಾಗಿ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಿದರು.
ಇದೇ ವೇಳೆ ಗಾಳಿ, ಬಿರುಗಾಳಿ, ಸುಂಟರಗಾಳಿ ಸೇರಿದಂತೆ ನೈಸರ್ಗಿಕ ವಿಕೋಪಗಳಿಂದ ಮೀನುಗಾರರನ್ನು ರಕ್ಷಿಸುವಂತೆ, ಸಮೃದ್ಧ ಮೀನುಗಾರಿಕೆ ದೊರಕುವಂತೆ ಮೀನುಗಾರ ಕುಟುಂಬಗಳ ಜೀವನೋಪಾಯ ಸುಗಮವಾಗಿ ಸಾಗುವಂತೆ ಕಡಲಮಾತೆಗೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು.
ಮಳೆಗಾಲದ ಆರ್ಭಟ ಕಳೆದು, ರೌದ್ರರೂಪದಲ್ಲಿದ್ದ ಸಮುದ್ರವು ಶ್ರಾವಣ ಪೂರ್ಣಿಮೆಯ ವೇಳೆಗೆ ಶಾಂತ ಸ್ವರೂಪಕ್ಕೆ ತಿರುಗುವ ಸಂದರ್ಭದಲ್ಲಿ, ಆಳ ಸಮುದ್ರ ಮೀನುಗಾರಿಕೆಯನ್ನು ಆರಂಭಿಸುವ ಮುನ್ನ ಕಡಲತಾಯಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.
ಸೀತಾರಾಮ ಭಾಗವತ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿಕೊಟ್ಟರು. ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಡಿ. ಸುವರ್ಣ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

