ಉಡುಪಿ ಸೀನಿಯರ್ ಛೇಂಬರ್ ಇಂಟರ್ನ್ಯಾಶನಲ್ ನಿಂದ ಸಾಧಕರ ಮನೆಗೆ ತೆರಳಿ ಸನ್ಮಾನ
ವಿದ್ವಾನ್ ಕೆ. ಭವಾನಿ ಶಂಕರ್ ಹಾಗೂ ಶ್ರೀಮತಿ ಸುಹಾಸಿನಿ ದಂಪತಿಗೆ “ವಿದ್ಯಾ ನಾಟ್ಯ ಗೌರವ”
(Udupi) ಉಡುಪಿ : ಶಿಕ್ಷಕರ ದಿನಾಚರಣೆಯ ವಿಶೇಷ ದಿನವಾದ ಸೆಪ್ಟಂಬರ್ 5ರಂದು ಮುಂಜಾನೆ 8 ಗಂಟೆಯ ಸುಮಾರಿಗೆ ಯಾವುದೇ ಮುನ್ಸೂಚನೆ ನೀಡದೆ, ಸಾಧಕರ ಮನೆ ಬಾಗಿಲಿಗೆ ತೆರಳಿ ಅವರ ಸೇವೆ ಮತ್ತು ಸಾಧನೆಯನ್ನು ಗೌರವಿಸುವ ಅಪೂರ್ವ ಕ್ಷಣಕ್ಕೆ ಸೀನಿಯರ್ ಛೇಂಬರ್ ಇಂಟರ್ನ್ಯಾಶನಲ್ – ಉಡುಪಿ ಇಂದ್ರಾಳಿ ಸಾಕ್ಷಿಯಾಯಿತು.
ಶಿಕ್ಷಣ ಹಾಗೂ ನೃತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಿದ್ವಾನ್ ಕೆ. ಭವಾನಿ ಶಂಕರ್ ಹಾಗೂ ಶ್ರೀಮತಿ ಸುಹಾಸಿನಿ ದಂಪತಿಯನ್ನು ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ, ‘SCI ವಿದ್ಯಾ ನಾಟ್ಯ ಗೌರವ’ನೀಡಿ ಗೌರವಿಸಲಾಯಿತು.
ವಿದ್ವಾನ್ ಕೆ. ಭವಾನಿ ಶಂಕರ್ ಅವರು ಭರತನಾಟ್ಯ ಹಾಗೂ ನೃತ್ಯ ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ ಭ್ರಾಮರಿ ನಾಟ್ಯಾಲಯದ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡುತ್ತಿರುವ ಅವರು, ನೃತ್ಯ ಕಲೆಯ ಜೊತೆಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.
ದೂರದರ್ಶನದ ‘ಎ’ಗ್ರೇಡ್ ಕಲಾವಿದರಾಗಿರುವ ಅವರು, ತಮ್ಮ ಕಲಾ ಹಾಗೂ ಶಿಕ್ಷಣ ಸೇವೆಗಾಗಿ ಹಲವು ಪ್ರಶಸ್ತಿ-ಗೌರವಗಳಿಗೆ ಪಾತ್ರರಾಗಿದ್ದಾರೆ. ಅವರ ಬಳಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ನೃತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಈ ಮೂಲಕ ಅವರ ಕಲಾ ಸೇವೆಯ ಪ್ರಭಾವವು ಕೇವಲ ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ, ದೇಶ-ವಿದೇಶಗಳವರೆಗೂ ವಿಸ್ತರಿಸಿದೆ.
ಶ್ರೀಮತಿ ಸುಹಾಸಿನಿ ಅವರು ಕಲ್ಯಾಣಪುರದ ಮೌಂಟ್ ರೋಸರಿ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಪುಟ್ಟ ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಜೀವನದ ಪಾಠಗಳನ್ನು ಕಲಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅರ್ಥಪೂರ್ಣ ಸೇವೆ ಸಲ್ಲಿಸುತ್ತಿದ್ದಾರೆ.
ದಿಢೀರ್ ಸನ್ಮಾನ : ಭಾವಪರವಶಗೊಂಡ ಕುಟುಂಬ
ಯಾವುದೇ ಮುನ್ಸೂಚನೆ ನೀಡದೆ ಎಸ್ಸಿಐ ಉಡುಪಿ-ಇಂದ್ರಾಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಅವರ ಮನೆಗೆ ತೆರಳಿ, ದಂಪತಿಗೆ ಗೌರವ ಸಲ್ಲಿಸಿದಾಗ, ಕ್ಷಣಕಾಲ ಕುಟುಂಬದವರಿಗೆ ಏನು ನಡೆಯುತ್ತಿದೆ ಎಂಬುದೇ ಅರಿವಾಗಲಿಲ್ಲ. ತಮ್ಮ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ತಮ್ಮ ಮನೆ ಬಾಗಿಲಿಗೇ ಸಂಸ್ಥೆಯವರು ಬಂದಿರುವುದನ್ನು ಕಂಡು ದಂಪತಿ ಭಾವಪರವಶರಾದರು.
ಈ ಅಪರೂಪದ ಗೌರವದ ಕ್ಷಣಕ್ಕೆ ಸಾಕ್ಷಿಯಾಗಿದ್ದ ಭವಾನಿ ಶಂಕರ್ ಅವರ ತಂದೆ ನಿವೃತ್ತ ASI ಕೆ. ಭಾಸ್ಕರ್ ಹಾಗೂ ತಾಯಿ ಶ್ರೀಮತಿ ಪಿ. ಶಕುಂತಲಾ ಅವರ ಕಣ್ಣಲ್ಲೂ ಸಂತೋಷದ ಕಣ್ಣೀರು ತುಂಬಿತು. ಸನ್ಮಾನದ ಬಳಿಕ ಭಾಸ್ಕರ್ ರವರು ಅಧ್ಯಕ್ಷರನ್ನು ಭಾವನಾತ್ಮಕವಾಗಿ ತಬ್ಬಿಕೊಂಡು ಆನಂಧಾಶ್ರು ಸುರಿಸಿದರು.
ಸಾಧನೆಗೆ ಸನ್ಮಾನ ಸಿಗುವುದು ಸಂತೋಷದ ಕ್ಷಣವಾದರೆ, ತಮ್ಮ ಮನೆಯಲ್ಲೇ, ಯಾವುದೇ ನಿರೀಕ್ಷೆಯಿಲ್ಲದೆ ದೊರೆತ ಗೌರವವು ಭಾವನೆಗಳ ಕಟ್ಟೆಯೊಡೆಸಿದ ಕ್ಷಣವಾಗಿತ್ತು. ದಂಪತಿ ಹಾಗೂ ಹೆತ್ತವರ ಕಣ್ಣಂಚಿನಿಂದ ಜಾರಿದ ಆನಂದಾಶ್ರುಗಳು ಅಲ್ಲಿದ್ದ ಪ್ರತಿಯೊಬ್ಬರ ಮನಸ್ಸನ್ನೂ ತಟ್ಟಿದವು. ಆ ಕ್ಷಣವು ಸನ್ಮಾನಕ್ಕಿಂತಲೂ ಮಿಗಿಲಾಗಿ ಮಾನವೀಯತೆ, ಕೃತಜ್ಞತೆ ಮತ್ತು ಆತ್ಮೀಯತೆಯ ಸಂಕೇತವಾಗಿ ಮೂಡಿಬಂತು.
ಈ ಸಂದರ್ಭದಲ್ಲಿ ಎಸ್ಸಿಐ ಉಡುಪಿ ಇಂದ್ರಾಳಿ ಅಧ್ಯಕ್ಷ ಮನೋಜ್ ಕಡಬ, ಕಾರ್ಯದರ್ಶಿ ಸೆಲ್ವರಾಜ್, ಖಜಾಂಚಿ ಪ್ರೀತಿ ಕಲ್ಯಾಣಪುರ, ನಿರ್ದೇಶಕರಾದ ಶೆರ್ಲಿ ಮನೋಜ್ ಹಾಗೂ ಶೈನಿ ಸತ್ಯಭಾಮ ಉಪಸ್ಥಿತರಿದ್ದರು.

