ಕಾಗವಾಡದ ಮಂಗಳಮುಖಿ ರಮಜಾನ ದಾದು ಮುಲ್ಲಾರಿಗೆ ಸೂರಿಗಾಗಿ ಆಗ್ರಹ
ಶೀಘ್ರ ನಿವೇಶನ ನೀಡಲು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳಿಗೆ ಸೂಚನೆ
(Athani) ಅಥಣಿ: ತಾಲೂಕಿನ ಕಾಗವಾಡದಲ್ಲಿ ವಾಸವಿರುವ ರಮಜಾನ ದಾದು ಮುಲ್ಲಾ (ಮಂಗಳಮುಖಿ) ಅವರು ಸ್ವಂತ ಜಾಗ ಹಾಗೂ ಸೂರಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಇವರಿಗೆ ಕೂಡಲೇ ಸರ್ಕಾರದ ವತಿಯಿಂದ ಮನೆ ಹಾಗೂ ಜಾಗ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಪ್ರಸ್ತುತ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಗಂಭೀರವಾಗಿ ಪರಿಗಣಿಸಿ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತಿಗೆ ತೆರಳಿ ನೆರವು ಕೋರಿದಾಗಲೆಲ್ಲಾ ಅಧಿಕಾರಿಗಳು ಯಾವುದೋ ಕಾರಣಗಳನ್ನು ಮುಂದಿಟ್ಟುಕೊಂಡು ವಾಪಸ್ ಕಳುಹಿಸುತ್ತಿದ್ದಾರೆ. ಮಂಗಳಮುಖಿ ಸಮುದಾಯಕ್ಕೆ ಮನೆ ಸಿಗುವುದಿಲ್ಲ, ಬಾಡಿಗೆಗೂ ಮನೆ ಸಿಗುವುದಿಲ್ಲ ಹಾಗೂ ಉದ್ಯೋಗವೂ ಇಲ್ಲದೆ ಅಯೋಮಯ ಬದುಕು ಸಾಗಿಸುತ್ತಿರುವುದಾಗಿ ರಮಜಾನ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷರ ಸೂಚನೆ ಮತ್ತು ಸ್ಥಳೀಯ ಮುಖಂಡರ ಭರವಸೆ:
ಸಮಸ್ಯೆಯ ಬಗ್ಗೆ ಸ್ಪಂದಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು, “ಇವರ ನೈಜ ಬದುಕು ಶೋಚನೀಯವಾಗಿದ್ದು, ಸರ್ಕಾರವೇ ವಿಶೇಷ ಸರ್ವೇ ನಡೆಸಿ ಇವರಿಗೆ ಪ್ರತ್ಯೇಕವಾಗಿ ಮನೆಗಳನ್ನು ನೀಡುವ ನಿಯಮವಿದೆ. ಕಾಗವಾಡ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರಿ ಮಾರ್ಗಸೂಚಿಯನ್ವಯ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ತಾಕೀತು ಮಾಡಿದರು.
ಈ ವೇಳೆ ಕಾಗವಾಡ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಅಥಣಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮುಖಂಡರಾದ ಚಿದಾನಂದ ಸವದಿ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ವಿನಾಯಕ ಬಾಗಡಿ ಕೂಡಲಿ ಅವರು ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರಮುಖ ಬೇಡಿಕೆಗಳು ಹಾಗೂ ಆಗ್ರಹ:
ಕಾಗವಾಡ ಹಾಗೂ ಅಥಣಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರಮಜಾನ ದಾದು ಮುಲ್ಲಾ ಅವರಿಗೆ ವಸತಿ ಸೌಲಭ್ಯ ಕಲ್ಪಿಸ ಬೇಕು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ (ಮಂಗಳಮುಖಿಯರಿಗೆ) ಎದುರಾಗುತ್ತಿರುವ ವಸತಿ ನಿರಾಕರಣೆ ಹಾಗೂ ತಾರತಮ್ಯವನ್ನು ಸರಿಪಡಿಸಬೇಕು.
ಸರ್ಕಾರದ ವಿಶೇಷ ಯೋಜನೆಯಡಿ ಜಾಗ ಮತ್ತು ಮನೆ ಮಂಜೂರು ಮಾಡಿ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಲಾಗಿದೆ.
ವರದಿ: ಮಹೇಶ್ ಶರ್ಮ

