ಬಂಟಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಕಾರ್ಮಿಕರ ಸುರಕ್ಷತೆಗೆ ಸ್ಮಾರ್ಟ್ ಹೆಲ್ಮೆಟ್ ಅಭಿವೃದ್ಧಿ
ಶ್ರೀಮತಿ ಯೋಗೇಶ್ವರಿ ಬಿ ಎಚ್ ಇವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಪಡಿಸಿದ ಹೆಲ್ಮೆಟ್
(Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅನ್ನಪೂರ್ಣ ಶೆಣೈ, ದಿವ್ಯಾಂತ್, ಹ್ಯಾನ್ಸ್ಲಿ ಲೂಯಿಸ್ ಮತ್ತು ಕಾರ್ತಿಕ್ ಪಾಟೀಲ್ ಅವರು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಯೋಗೇಶ್ವರಿ ಬಿ ಎಚ್ ಇವರ ಮಾರ್ಗದರ್ಶನದಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರ ಸುರಕ್ಷತೆಗೆ ಸ್ಮಾರ್ಟ್ ಹೆಲ್ಮೆಟನ್ನು ಅಭಿವೃದ್ಧಿ ಪಡಿಸಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆಯಲ್ಲಿ ವಿಷಕಾರಿ ಅನಿಲಗಳು, ಹೆಚ್ಚಿನ ಉಷ್ಣಾಂಶ ಮತ್ತು ಕಡಿಮೆ ಆಮ್ಲಜನಕ ಮಟ್ಟ ಮುಂತಾದ ಅಪಾಯಗಳು ಇರುವುದರಿಂದ ಅವುಗಳನ್ನು ಗಮನಿಸಿ ಕಾರ್ಮಿಕರ ಮೇಲ್ವಿಚಾರಣೆಗೆ ಈ ಸ್ಮಾರ್ಟ್ ಹೆಲ್ಮೆಟ್ ಅನ್ನು ಅಭಿವೃದ್ಧಿ ಪಡಿಸಿರುತ್ತಾರೆ.
ಈ ಸ್ಮಾರ್ಟ್ ಹೆಲ್ಮೆಟ್ ಪರಿಸರದ ಸ್ಥಿತಿಗತಿಗಳನ್ನು ಮೇಲ್ವಿಚಾರಣೆ ಮಾಡಿ, ಅಪಾಯಕಾರಿ ಪರಿಸ್ಥಿತಿಗಳಲ್ಲಿ ಎಚ್ಚರಿಕೆ ನೀಡುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಗಣಿ ಕಾರ್ಮಿಕರಿಗೆ ಸಂಕೇತ ಕಳುಹಿಸಲು ಸಹಾಯಕವಾಗುವ ವಿಶೇಷ ತುರ್ತು ಸೌಲಭ್ಯವನ್ನೂ ಇದರಲ್ಲಿ ಅಳವಡಿಸಲಾಗಿದೆ. ಇದು ಭೂಗರ್ಭ ಗಣಿಗಳಲ್ಲಿ ಬಳಸಲು ಸೂಕ್ತವಾಗಿದೆ.
ಈ ನವೀನ ಆವಿಷ್ಕಾರವು ಮುನ್ನೆಚ್ಚರಿಕೆ ಮತ್ತು ತ್ವರಿತ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳ ಮೂಲಕ ಗಣಿಗಾರಿಕೆಯಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಅಲ್ಲದೆ ನಿರ್ಮಾಣ, ಸುರಂಗ ಕಾಮಗಾರಿಗಳು ಮತ್ತು ರಾಸಾಯನಿಕ ಕೈಗಾರಿಕೆಗಳಂತಹ ಹೆಚ್ಚಿನ ಅಪಾಯವಿರುವ ಇತರ ಕ್ಷೇತ್ರಗಳಲ್ಲಿಯೂ ಕಾರ್ಮಿಕರ ರಕ್ಷಣೆಗೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ.
ವಿದ್ಯಾರ್ಥಿಗಳು ಅಭಿವೃದ್ದಿ ಪಡಿಸಿದ ಈ ಮಾದರಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕರು ಅಭಿನಂದಿಸಿದ್ದಾರೆ.

