ಶ್ರೀರಸ್ತು ಸೌಹಾರ್ದ ಸೊಸೈಟಿ ವತಿಯಿಂದ ಮಕ್ಕಳಿಗೆ ಸಹಕಾರ ಧ್ವಜ ಚಿತ್ರ ಬಿಡಿಸುವ ಸ್ಪರ್ಧೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಆರ್.ವಿ. ಕುಂದರ್
(Udupi) ಉಡುಪಿ: ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯವು ಐದು ಯಶಸ್ವಿ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಉಡುಪಿಯ ಶ್ರೀರಸ್ತು ಸೌಹಾರ್ಧ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ಮಕ್ಕಳಿಗಾಗಿ ಸಹಕಾರಿ ಧ್ವಜದ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಯಿತು.
ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದರು.
ಸ್ಪರ್ಧೆಯಲ್ಲಿ ನಾಲ್ವರು ಪ್ರಥಮ ಹಾಗೂ ನಾಲ್ವರು ದ್ವಿತೀಯ ಸ್ಥಾನ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು. ಅಲ್ಲದೆ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ನೆನಪಿನ ಉಡುಗೊರೆಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಆರ್.ವಿ. ಕುಂದರ್ ವಹಿಸಿದ್ದರು.
ಉದ್ಯಮಿ ಎಸ್.ಎನ್. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಚಳವಳಿಯ ಮಹತ್ವ, ಸಹಕಾರ ಸಚಿವಾಲಯದ ಸಾಧನೆಗಳು ಹಾಗೂ ಸಹಕಾರಿ ಧ್ವಜದ ಇತಿಹಾಸ ಮತ್ತು ಅದರ ಸಂದೇಶವನ್ನು ಮಕ್ಕಳಿಗೆ ತಿಳಿಸಿದರು.
ಸ್ಪರ್ಧೆಗೆ ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿಯ ಕಲೆ ಮತ್ತು ಕರಕುಶಲ ಶಿಕ್ಷಕ ಅಂಕಿತ್ ಆರ್. ಪೂಜಾರಿ, ತುಳು ಮತ್ತು ಕನ್ನಡ ಸಾಹಿತಿ ಧರ್ಮದತ್ತ ದೆಂದೂರು ದಯಾನಂದ ಕೆ. ಶೆಟ್ಟಿ, ಸಾಹಿತಿ, ಪತ್ರಕರ್ತ ಹಾಗೂ ಸಿನಿ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಬ್ಯಾಂಕ್, ಹೆಜಮಾಡಿ ಶಾಖೆಯ ಮೆನೇಜರ್ ನಾಗರಾಜ್, ಸೊಸೈಟಿಯ ಉಪಾಧ್ಯಕ್ಷ ಪ್ರಶಾಂತ್ ಎಸ್., ಪ್ರಧಾನ ವ್ಯವಸ್ಥಾಪಕಿ ಸರಿತ, ನಿರ್ದೇಶಕರಾದ ಅಶೋಕ್ ಶೇರಿಗಾರ್ (ಅಲೆವೂರು), ಮಾಧವ ಹಾಗೂ ವಿಶ್ವನಾಥ್ ನಾಯಕ್ ಉಪಸ್ಥಿತರಿದ್ದರು.
ಮೆನೇಜರ್ ದಿವ್ಯ ಸ್ವಾಗತಿಸಿ, ಚೈತ್ರ, ಪ್ರತೀಕ್ಷಾ, ಮತ್ತು ಅಶ್ಮಿತ ಕಾರ್ಯಕ್ರಮ ನಿರೂಪಿಸಿ, ಹರೀಶ್ ವಂದಿಸಿದರು.

