ಕರ್ನಾಟಕ ಬ್ಯಾಂಕ್ ನಿಂದ ಇನ್ನಂಜೆ ಎಸ್. ವಿ. ಎಚ್. ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶಾಲಾ ಬಸ್ ಹಸ್ತಾಂತರ
ಶೈಕ್ಷಣಿಕ ಶಿಸ್ತಿನೊಂದಿಗೆ ವಿದ್ಯಾರ್ಥಿಗಳಿಗೆ ವ್ಯವಸ್ಥೆಗಳ ಜೋಡಣೆಯೂ ಅತ್ಯಾವಶ್ಯಕ : ಸೋದೆ ಶ್ರೀ
(Innanje) ಇನ್ನಂಜೆ : ಕಾಪು ತಾಲೂಕಿನ ಇನ್ನಂಜೆ ಎಸ್. ವಿ. ಎಚ್. ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಕರ್ನಾಟಕ ಬ್ಯಾಂಕ್ ವತಿಯಿಂದ ಕೊಡಮಾಡಿದ ಹೊಸ ಶಾಲಾ ವಾಹನದ ಹಸ್ತಾಂತರ ಕಾರ್ಯಕ್ರಮವು ಬುಧವಾರ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸ್ ಸ್ವೀಕರಿಸಿದ ಉಡುಪಿ ಶ್ರೀ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಶಿಸ್ತಿನ ಜೊತೆಗೆ ವಿದ್ಯಾರ್ಥಿಗಳಿಗೆಅನುಕೂಲಕರ ವ್ಯವಸ್ಥೆಯೂ ಇರಬೇಕಿದೆ. ಕರ್ನಾಟಕ ಬ್ಯಾಂಕ್ ನಮ್ಮ ಯೋಜನೆಗೆ ಪೂರಕವಾಗಿ ಮೂರನೇ ಬಸ್ ಕೊಡುಗೆ ನೀಡುತ್ತಿದೆ. ಈ ಮೂಲಕವಾಗಿ ಇನ್ನಂಜೆ ಸಮೂಹ ವಿದ್ಯಾ ಸಂಸ್ಥೆಗಳ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅರ್ಥಪೂರ್ಣವಾಗಿ ನಡೆದಿದೆ ಎಂದರು.
ಕರ್ನಾಟಕ ಬ್ಯಾಂಕ್ ಗೂ ಸೋದೆ ಮಠಕ್ಕೂ ಇರುವ ಅವಿನಾಭಾವ ಸಂಬಂಧವನ್ನು ನೆನಪಿಸಿಕೊಂಡ ಸೋದೆ ಶ್ರೀಗಳು, ಹಿಂದಿನಿಂದಲೂ ಸೋದೆ ಮಠದ ಪರ್ಯಾಯ, ಜನಸೇವಾ ಕಾರ್ಯಕ್ರಮಗಳು, ವಿವಿಧ ಯೋಜನೆಗಳಿಗೆ ಪೂರಕ ಸ್ಪಂಧನೆ ಸಿಗುತ್ತಿದೆ. ಹಾಲಿ ಸಿಇಒ ರಾಘವೇಂದ್ರ ಶ್ರೀನಿವಾಸ್ ಭಟ್ ಅವರು ಬಂದ ಬಳಿಕ ಈ ಮತ್ತೆ ಭಾಂದವ್ಯ ಮತ್ತಷ್ಟು ಹೆಚ್ಚಿದೆ. ಬ್ಯಾಂಕ್ ನಿಂದ ಕೊಡುಗೆ ಪಡೆಯುವ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಇಂತಹ ಸೇವೆ ನೀಡಲು ಮುಂದಾಗಬೇಕಿದೆ ಎಂದರು.
ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಶ್ರೀನಿವಾಸ ಭಟ್ ಮಾತನಾಡಿ, ಸಮಾಜದ ಅಭ್ಯುದಯಕ್ಕೆ ಸೋದೆ ಮಠದ ಕೊಡುಗೆ ಅಪಾರವಾಗಿದೆ. ಸೋದೆ ಮಠದ ಮೂಲಕ ಸ್ಥಾಪನೆಗೊಂಡಿರುವ ಇನ್ನಂಜೆಸಮೂಹ ಶಿಕ್ಷಣ ಸಂಸ್ಥೆಗಳು ಇತರೆಲ್ಲಾ ಶಿಕ್ಷಣ ಸಂಸ್ಥೆಗಳಿಗಿಂತಲೂ ಮಾದರಿಯಾಗಿ ಸೇವೆ ಸಲ್ಲಿಸುತ್ತಿವೆ. ಸಮಾಜಕ್ಕೆ ಹಲವಾರು ಗಣ್ಯರನ್ನು ನೀಡಿರುವ ಇನ್ನಂಜೆ ಶಾಲೆಗೆ ಕರ್ನಾಟಕ ಬ್ಯಾಂಕ್ ವತಿಯಿಂದ ಮೂರನೇ ಬಸ್ ನೀಡುವ ಅವಕಾಶ ದೊರಕಿದ್ದು, ಮುಂದೆಯೂ ಇಂತಹ ಸೇವೆಯನ್ನು ನೀಡಲು ನಾವು ಬದ್ಧರಿದ್ದೇವೆ ಎಂದರು.
ಎಸ್.ವಿ.ಎಚ್. ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಪಾಡಿಗಾರು ಶ್ರೀನಿವಾಸ ತಂತ್ರಿ, ಕಾರ್ಯದರ್ಶಿ ರತ್ನ ಕುಮಾರ್, ಕರ್ನಾಟಕ ಬ್ಯಾಂಕ್ ಎಜಿಎಂ ರಮೇಶ್ ವೈದ್ಯ, ಕಾರ್ ಸ್ಟ್ರೀಟ್ ಶಾಖಾ ಪ್ರಬಂಧಕ ಪ್ರಶಾಂತ್, ಬಂಟಕಲ್ ಮಧ್ವ ವಾದಿರಾಜ ತಾಂತ್ರಿ ಕಾಲೇಜು ಪ್ರಾಂಶುಪಾಲ ಫ್ರೊ. ಡಾ. ನಾಗರಾಜ್ ಭಟ್ ಉಪಸ್ಥಿತರಿದ್ದರು.
ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಒ ಡಾ. ರಾಧಾಕೃಷ್ಣ ಎಸ್. ಐತಾಳ್ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕ ರಾಘವೇಂದ್ರ ಪುರಾಣಿಕ್ ಪರಿಚಯಿಸಿದರು. ಎಸ್.ವಿ.ಎಚ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು ವಂದಿಸಿದರು. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ರಾಯಿಲಿನ್ ಪ್ರಿಯಾ ಕೆಸ್ತಲಿನೋ ಕಾರ್ಯಕ್ರಮ ನಿರೂಪಿಸಿದರು.

