ಕಾಪು ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಂವಾದ
ಸೂಕ್ತ ಅನುದಾನದ ಕೊರತೆಯಿಂದ ಜನಪರ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ : ಶಾಸಕ ಗುರ್ಮೆ
(Padubidri) ಪಡುಬಿದ್ರಿ : ಆಸೆ ಆಕಾದಷ್ಟು ಅವಕಾಶ ಸಾಸಿವೆಯಷ್ಟು ಎಂಬ ಮಾತಿನಂತೆ ಅನುದಾನದ ಕೊರತೆಯಿಂದ ನಾವು ಅಂದುಕೊಂಡ ರೀತಿಯಲ್ಲಿ ಕೆಲಸ ಮಾಡಲಾಗುತ್ತಿಲ್ಲ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಕಾಪು ಪ್ರೆಸ್ ಕ್ಲಬ್ ವತಿಯಿಂದ ಜರಗಿದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ದಿನದ 24 ಗಂಟೆಯೂ ಜನರ ಸಮಸ್ಯೆಗಳಿಗೆ ಕಿವಿಯಾಗಬೇಕೆನ್ನುವ ಜವಾಬ್ದಾರಿಯಿದೆ. ಆದರೆ ಸೂಕ್ತ ಅನುದಾನದ ಕೊರತೆಯಿಂದ ಜನಪರ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಶಾಸಕತ್ವದ ಅವಧಿಯಲ್ಲಿ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುವ ಪ್ರಯತ್ನ ಮಾಡುತ್ತಿದ್ದೇನೆ. ಯಾರಿಗೂ ಟೀಕೆ ಮಾಡಲ್ಲ. ಟೀಕೆಗಳಿಗೆ ಕೆಲಸದ ಮೂಲಕ ಉತ್ತರ ನೀಡುವ ಕೆಲಸ ಮಾಡಿದ್ದೇನೆ ಎಂದರು.
ಸದನದಲ್ಲಿ ಕರಾವಳಿಯ ಸಮಸ್ಯೆಗಳಿಗೆ ಸರಕಾರ ತೇಲಿಸಿ ಬಿಡುವ ಉತ್ತರ ನೀಡಿದೆ. ಕರಾವಳಿ ಕಡೆಗಣಿಸಲ್ಪಡುತ್ತಿದೆ. ಇಲ್ಲಿಯ ಸಮಸ್ಯೆ ನಿರ್ಮೂಲನಕ್ಕೆ ಮಂತ್ರಿಗಳು, ಅಧಿಕಾರಿಗಳ ಬಳಿ ಮಾತನಾಡಲು ಸದಾ ಸಿದ್ಧ. ರಸ್ತೆ ಬಿಡಿ ರಸ್ತೆ ಗುಂಡಿ ಮುಚ್ಚಲೂ ಹಣ ನೀಡುತ್ತಿಲ್ಲ.
ಉಚ್ಚಿಲ ಪೊಲ್ಯ ರಸ್ತೆ ಕಾಮಗಾರಿ ನೆನೆಗುದಿಗೆ : ರಾಹೆ ೬೬ರ ಪೂರ್ವಬದಿಯಲ್ಲಿರುವ ಪೊಲ್ಯ ರಸ್ತೆಯು ಸುಮಾರು ಐದು ವರ್ಷಗಳಿಂದ ರಿಪೇರಿ ಭಾಗ್ಯ ಕಂಡಿಲ್ಲ. ಈ ಬಗ್ಗೆ ಕಳೆದ ಗ್ರಾಮ ಸಭೆಯಲ್ಲಿ ಪ್ರಶ್ನಿಸಿದಾಗ, ಮಾಜಿ ಅಧ್ಯಕ್ಷ ಶಿವಕುಮಾರ್ ಮೆಂಡನ್ ಉತ್ತರಿಸಿ, ಈಗಾಗಲೇ ಈ ರಸ್ತೆಗೆ ಟೆಂಡರ್ ಕರೆಯಲಾಗಿದೆ. ಕಾರ್ಕಳದ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ ಎಂದು ಗ್ರಾಮಸ್ಥರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಗ್ರಾಮಾಧಿಕಾರಿಯವರೊಂದಿಗೆ ಕೇಳಿದಾಗ, ಯಾವುದೇ ಪ್ರಸ್ತಾವನೆಯೇ ಇಲ್ಲ ಎನ್ನುತ್ತಾರೆ. ಸತ್ಯ ಏನೆಂದು ತಿಳಿದಿದೆಯೇ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಲ್ಲಿ ಪತ್ರಕರ್ತ ಬಾಲಕೃಷ್ಣ ಉಚ್ಚಿಲ ಪ್ರಶ್ನಿಸಿದಾಗ, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಒಮ್ಮೇಲೆಗೆ ಆ ರಸ್ತೆ ಮಾಡುವ ಹಾಗಿಲ್ಲ. ಸ್ವಲ್ಪ ಜಾಗಕ್ಕೆ ಕಾಂಕ್ರೀಟ್ ರಸ್ತೆ ಮಾಡಬಹುದೆಂದರು.
ಕೊಳಚೆ ನೀರಿನ ಸಮಸ್ಯೆ : ಕಾಪು ಮತ್ತು ಪಡುಬಿದ್ರಿ ಭಾಗದಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗೆ ವಸತಿಗೃಹಗಳು, ಹೋಟೆಲ್ ಗಳು ಅಕ್ರಮ ಪೈಪ್ ಅಳವಡಿಸಿ ಕೊಳಚೆ ನೀರು ಬಿಟ್ಟು ದುರ್ನಾತ ಬೀರುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಅವಕಾಶವಿದೆ. ನಮ್ಮಲ್ಲಿ ಇಂಗು ಗುಂಡಿ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡಬೇಕು.
ರಸ್ತೆ ಸಮಸ್ಯೆ: ಪಡುಬಿದ್ರಿ-ಕಟಪಾಡಿವರೆಗೆ ಸರ್ವಿಸ್ ರಸ್ತೆ ಕಾಮಗಾರಿ ಆರಂಭವಾಗಿದೆ. ಪಡುಬಿದ್ರಿಯಲ್ಲಿ ಫ್ಲೈ ಓವರ್ ಕಾಮಗಾರಿ ಸೂಕ್ತ ಎನ್ನುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಪಂಚಾಯತ್ ವ್ಯಾಪ್ತಿಯ ಸುಮಾರು 20 ರಸ್ತೆಗಳು ಹಾಳಾಗಿದೆ. 20 ಕೋಟಿಯ ಅನುದಾನದಲ್ಲಿ ಮಾಡಲಾಗುವುದು. ಗ್ರಾಮ ಸಡಕ್ ಯೋಜನೆಯ ಮೂಲಕ 9 ರಸ್ತೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸರಕಾರಿ ಜಾಗದ ಕೊರತೆ : ಕಾಪುವಿಗೆ ಪುರಸಭೆ ಹಾಗೂ ಪ್ರಾಧಿಕಾರದ ಅಗತ್ಯವಿರಲಿಲ್ಲ. ಪುರಸಭೆಯಾದ ಬಳಿಕ ಅನುದಾನವೂ ಬರುತ್ತಿಲ್ಲ. ಕ್ರೀಡಾಂಗಣ, ಸಬ್ ರಿಜಿಸ್ಟ್ರಾರ್ ಕಚೇರಿ, ಇತರೆ ಇಲಾಖೆಗಳಿಗೆ ನಿವೇಶನದ ಅಗತ್ಯವಿದೆ.
ಕೆರೆ ಅಭಿವೃದ್ಧಿ : ಕಾಪುವಿನಲ್ಲಿ ಸುಮಾರು 400 ಕೆರೆಗಳಿದ್ದು, ಅಂತರ್ಜಲ ಹೆಚ್ಚಿಸುವ ಅಗತ್ಯವಿದೆ. ಕಾಪು ಪತ್ರಕರ್ತರ ಸಂಘದ ಜೊತೆಗೆ ತಾಲೂಕಿನ ಯಾವುದಾದರೊಂದು ಕೆರೆಯನ್ನು ಅಭಿವೃದ್ಧಿ ಪಡಿಸುವ ಯೋಜನೆಯ ಇಚ್ಛೆಯನ್ನು ವ್ಯಕ್ತಪಡಿಸಿದರು.
ಇದರ ಜೊತೆಗೆ ತಾಲೂಕಿನಲ್ಲಿ 2 ಕೆಪಿಎಸ್ ಶಾಲೆಗಳ ಜೊತೆಗೆ ಮತ್ತೆರಡು ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಕಾಪು ತಾಲೂಕಿನಲ್ಲಿ 30 ಬೆಡ್ ಆಸ್ಪತ್ರೆಗೆ ಅನುಮತಿ ದೊರೆತಿದೆ. ಪಡುಬಿದ್ರಿಯಲ್ಲಿ ಅಗ್ನಿಶಾಮಕ ದಳದ ಕಾಮಗಾರಿ ಅಂತಿಮ ಹಂತದ ಜೊತೆಗೆ ಹೆಜಮಾಡಿ ಬಂದರು ಅನುದಾನದ ಕೊರತೆಯಿಂದ ಮುಂದೆ ಸಾಗುತ್ತಿಲ್ಲ. ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯ ಮೂಲಕ ಹೆಜಮಾಡಿ ಕ್ರೀಡಾಂಗಣವನ್ನು ಉನ್ನತೀಕರಿಸುವ ಯೋಜನೆಯ ಪ್ರಸ್ತಾವನೆ, ಶಾಸಕರ ಮಹತ್ವಾಕಾಂಕ್ಷೆಯ ಗೋ ರುದ್ರ ಭೂಮಿಯು ಅಂತಿಮ ಹಂತದಲ್ಲಿದೆ. ಪಡುಬಿದ್ರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕಾಪು ತಾಲೂಕಿಗೆ ಅಂತರಾಷ್ಟ್ರೀಯ ಕ್ರೀಡಾಂಗಣದ ಯೋಜನೆಯ ಬಗ್ಗೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭ ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಅಬ್ದುಲ್ ಹಮೀದ್, ಕಾರ್ಯದರ್ಶಿ ಪುಂಡಲೀಕ ಮರಾಠೆ, ಕೋಶಾಧಿಕಾರಿ ಸಂತೋಷ್ ನಾಯ್ಕ್, ಪ್ರೆಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

