ಹೆಜಮಾಡಿ ಟೋಲ್ ಅಧಿಕಾರಿಗಳ ನಿರ್ಲಕ್ಷ್ಯ : ಶಾಸಕ ಗುರ್ಮೆ ಆಕ್ರೋಶ.
ಹೆಜಮಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸಭೆ
(Hejamadi) ಹೆಜಮಾಡಿ: ಉಡುಪಿ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರ ಸಹಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಂಡಿಸಲಾದ ನಿರ್ಣಯವನ್ನು ಟೋಲ್ ಅಧಿಕಾರಿಗಳು ಅಳವಡಿಸಿಕೊಳ್ಳದ ಬಗ್ಗೆ ಕಾಪು ಶಾಸಕರು ಮತ್ತು ಗ್ರಾಮಸ್ಥರು ಟೋಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ಮದ್ಯಾಹ್ನ ಹೆಜಮಾಡಿ ಪಂಚಾಯತ್ ಸಭಾಂಗಣದಲ್ಲಿ ಟೋಲ್ ಸಮಸ್ಯೆ ಕುರಿತು ಕರೆದ ಟೋಲ್ ಅಧಿಕಾರಿಗಳ ಸಭೆಯಲ್ಲಿ ಘಟಿಸಿದೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಟೋಲ್ ಅಧಿಕಾರಿಗಳು ಸಾಮಾಜಿಕ ನ್ಯಾಯದ ಮೇಲೆ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ತಿಂಗೊಳೊಳಗೆ ದ.ಕ. ಮತ್ತು ಉಡುಪಿ ಸಂಸದರೊಂದಿಗೆ ಸಭೆ ನಡೆಸುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಟೋಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ವರ್ಷದ ಹಿಂದೆ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ಸಮ್ಮುಖದ ಸಭೆಯಲ್ಲಿ ನಿರ್ದೇಶಿಸಿದ ಕಾಮಗಾರಿಗಳನ್ನು ತಿಂಗೊಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಈ ಸಂದರ್ಭ ಗ್ರಾಮಸ್ಥರಿಗೆ ಉಡಾಫೆ ಉತ್ತರ ನೀಡಿದ ಟೋಲ್ ಅಧಿಕಾರಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
2025 ರಲ್ಲಿ ಉಡುಪಿ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರ ಸಹಿತ ಜನಪ್ರತಿನಿಧಿಗಳ ಸಭೆಯಲ್ಲಿ ಹಳೆ ಎಂಬಿಸಿ ರಸ್ತೆ, ನಾರಾಯಣಗುರು ರಸ್ತೆಯನ್ನು ದುರಸ್ತಿ ಮತ್ತು ನಿರ್ವಹಣೆ, ಕಾಲ ಕಾಲಕ್ಕೆ ದಾರಿ ದೀಪದ ನಿರ್ವಹಣೆ, ಶಾಲಾ ಬಳಿಯ ಚರಂಡಿ ವ್ಯವಸ್ಥೆ ಪೂರ್ಣಗೊಳಿಸಬೇಕು. ಟೋಲ್ ಸಿಬ್ಬಂದಿಗಳ ಭರ್ತಿ, ಸ್ಥಳೀಯರಿಗೆ ಟೋಲ್ ವಿನಾಯಿತಿ, ಶಾಲೆ ಆರಂಭ ಮತ್ತು ಬಿಡುವ ಸಮಯ ಮಕ್ಕಳ ಸುರಕ್ಷತೆಗೆ ಪೋಲಿಸರ ನೇಮಕ, ಸ್ಕೈವಾಕ್ ನಿರ್ಮಾಣದ ಬಗ್ಗೆ ನಿರ್ಣಯಿಸಲಾಗಿತ್ತು. ಇದುವರೆಗೂ ಕಾರ್ಯಗತಗೊಳ್ಳದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತ್ ಮಾಜಿ ಸದಸ್ಯ ಶರಣ್ ಕುಮಾರ್ ಮಟ್ಟು ಮಾತನಾಡಿ, ವರ್ಷದ ಹಿಂದೆ ಜಿಲ್ಲಾಧಿಕಾರಿ ಸಹಿತ ಅಧಿಕಾರಿ ವರ್ಗದವರ ಸಮ್ಮುಖದ ನಿರ್ಣಯಕ್ಕೆ ಬೆಲೆ ನೀಡದ ಟೋಲ್ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ಸ್ಥಳೀಯರ ಬಗ್ಗೆ ತಿಳಿಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ಥಳೀಯರಿಗೆ ಟೋಲ್ ವಿನಾಯಿತಿ ಇದ್ದರೂ ಟೋಲ್ ಕಡಿತಗೊಳಿಸುತ್ತಿದ್ದಾರೆ ಎಂದು ದೂರಿದರು.
ಹೆಜಮಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪಾಂಡುರಂಗ ಕರ್ಕೇರಾ ಮಾತನಾಡಿ, ವಿನಾಯಿತಿ ನೀಡಿದ ಸ್ಥಳೀಯ ಕೆಲಸಗಾರರ ಸಂಬಳದಿಂದ ಹಣ ಕಡಿತಗೊಳಿಸಲಾಗುತ್ತಿದೆ. ಈ ಮೂಲಕ ಸ್ಥಳೀಯ ಕಾರ್ಮಿಕರಿಗೆ ತೊಂದರೆ ನೀಡಲಾಗಿದೆ. ಜನಪ್ರತಿನಿಧಿಗಳ ಕರೆಯನ್ನೂ ಸ್ವೀಕರಿಸದ ಟೋಲ್ ಅಧಿಕಾರಿಗಳು ಸಾರ್ವಜನಿಕರಿಗೆ ಏನು ಮಾಡಿಯಾರು ಎಂದು ಪ್ರಶ್ನಿಸಿದರು.
ಇದೇ ಸಂದರ್ಭ ಟ್ಯಾಕ್ಸಿ ಚಾಲಕರಿಗೆ ವಿನಾಯಿತಿ ನೀಡುವ ಬಗ್ಗೆ ಮುಲ್ಕಿ ಟ್ಯಾಕ್ಸಿ ಚಾಲಕ ಮಾಲಕರ ಸಂಘಟನೆಯ ಪ್ರಮುಖರು ಬೇಡಿಕೆ ಸಲ್ಲಿಸಿದರು.
ಸಭೆಯಲ್ಲಿ ಸೈಟ್ ಇಂಜಿನಿಯರ್ ನಾಸಿರ್, ಟೆಕ್ನಿಕಲ್ ಮ್ಯಾನೇಜರ್ ಚಂದ್ರಶೇಖರ, ಮ್ಯಾನೇಜರ್ ರಾಜ್ ಕುಮಾರ್, ಟೋಲ್ ಮ್ಯಾನೇಜರ್ ದೀಪಕ್ ತಿಮ್ಮಯ್ಯ, ರೆಸಿಡೆಂಟ್ ಇಂಜಿನಿಯರ್ ಅಲೋಕ್ ಕುಮಾರ್ , ಅಸಿಸ್ಟೆಂಟ್ ಇಂಜಿನಿಯರ್ ವಿಘ್ನೇಶ್, ಹೆಜಮಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಇನಾಯತುಲ್ಲ ಬೇಗ್, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

