ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿದ್ದ ಕೆ ಅಣ್ಣಾಮಲೈ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರವರಿಗೆ ರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಕೆ
(New Dhelhi)ಹೊಸದಿಲ್ಲಿ: ತಮಿಳುನಾಡು ರಾಜ್ಯದ ಬಿಜೆಪಿ ಮುಖ್ಯಸ್ಥರಾಗಿದ್ದ ಕೆ ಅಣ್ಣಾಮಲೈ ಬಿಜೆಪಿಯನ್ನು ತೊರೆಯಲು ನಿರ್ಧರಿಸಿ, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಆ ಮೂಲಕ ವರಿಷ್ಠರ ಮನವೊಲಿಕೆ ವಿಫಲವಾಗಿದೆ. ರಾಜ್ಯಸಭಾ ಸ್ಥಾನವನ್ನೂ ನಿರಾಕರಿಸಿ ಪಕ್ಷ ತೊರೆಯಲು ಕೆ ಅಣ್ಣಾಮಲೈ ನಿರ್ಧರಿಸಿದ್ದಾರೆ. ಜೂನ್ 4 ಕ್ಕೆ ಅವರ ಹಟ್ಟುಹಬ್ಬ ಇದ್ದು, ಅಂದೇ ಮುಂದಿನ ನಿರ್ಧಾರ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
ಪ್ರಾದೇಶಿಕವಾಗಿ ಅಹಿಂದ ಮಾದರಿಯಲ್ಲಿ ಹೊಸ ಪಕ್ಷ ಕಟ್ಟುವ ಸಾಧ್ಯತೆ ಇದೆ. ಐದು ಪುಟಗಳ ಪತ್ರ ಬರೆದಿದ್ದ ಅವರು, ಇಂದು ಬೆಳಿಗ್ಗೆ (ಜೂನ್ 2) ನಿತಿನ್ ನಬಿನ್ ಅವರಿಗೆ ರಾಜಿನಾಮೆ ಸಲ್ಲಿಸಿ, ರಾಜೀನಾಮೆ ಘೋಷಿಸಿದ್ದಾರೆ. ತಮಿಳುನಾಡು ಚುನಾವಣಾ ಫಲಿತಾಂಶದಿಂದ ಅಸಮಾಧಾನಗೊಂಡಿದ್ದ ಅಣ್ಣಾಮಲೈ ರಾಜೀನಾಮೆ ಸಲ್ಲಿಸಿದ್ದಾರೆ.
ನಟ ವಿಜಯ್ ಸರಕಾರ ರಚನೆಯೊಂದಿಗೆ ಭಾರಿ ಬದಲಾವಣೆ ಕಂಡುಕೊಂಡಿದ್ದ ತಮಿಳುನಾಡಲ್ಲಿ ಇದೀಗ ಅಣ್ಣಾಮಲೈ ರಾಜೀನಾಮೆಯೂ ದೊಡ್ಡ ಸುದ್ದಿಯಾಗಿದೆ. ಇದರೊಂದಿಗೆ ಸ್ವಂತ ರಾಜಕೀಯ ಸಂಘಟನೆ ಮಾಡಿ, ಹೊಸ ಬಲಪಂಥೀಯ ಮಾದರಿಯಲ್ಲೆ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಈ ಬಗ್ಗೆ ಹುಟ್ಟುಹಬ್ಬದ ದಿನ ಘೋಷಿಸುವ ಸಾಧ್ಯತೆ ಇದೆ. “ಜನ ಚಳುವಳಿಯನ್ನ” ಆರಂಭಿಸಿ, ಇದಕ್ಕೆ ರಜನೀಕಾಂತ್ ಬೆಂಬಲವನ್ನೂ ಪಡೆಯಲಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಹೆಸರುವಾಸಿ ಐಪಿಎಸ್ ಅಧಿಕಾರಿಯಾಗಿದ್ದ ತಮಿಳುನಾಡು ಕರೂರು ಜಿಲ್ಲೆಯ ಅಣ್ಣಾಮಲೈ ವೃತ್ತಿಗೆ ರಾಜೀನಾಮೆ ನೀಡಿ, 2020 ರಲ್ಲಿ ಬಿಜೆಪಿ ಸೇರಿದ್ದರು. 2021 ರಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ಆರಂಭದಿಂದಲೂ ಎಐಎಡಿಎಂಕೆಯೊಂದಿಗೆ ಬಿಜೆಪಿ ಮೈತ್ರಿ ನಡೆಸಬಾರದೆಂದು ಒತ್ತಾಯಿಸಿದ್ದರು. ತಮಿಳುನಾಡಲ್ಲಿ ಎನ್ ಮಣ್ಣ್ ಎನ್ ಮಕ್ಕಳ್ (ನನ್ನ ಮಣ್ಣು-ನನ್ನ ಜನ ) ಎಂಬ ಪಾದಯಾತ್ರೆ ಮೂಲಕ ಬಿಜೆಪಿಯ ಪ್ರಚಾರ ಹೆಚ್ಚಿಸಿದ್ದರು. ತಮಿಳುನಾಡಲ್ಲಿ ಬಿಜೆಪಿ ಅಸ್ತಿತ್ವ ಹೆಚ್ಚಿಸಿದರೂ, ಚುನಾವಣೆಯಲ್ಲಿ ಬದಲಾವಣೆ ತರಲು ಸಾಧ್ಯವಾಗಿಲ್ಲ.
ಎಐಎಡಿಎಂಕೆ ಪಕ್ಷದ ನಾಯಕ ಪಳನಿಸ್ವಾಮಿ ಜೊತೆ ನಿರಂತರ ಸಂಘರ್ಷಕ್ಕಿಳಿದ ಪರಿಣಾಮ ಎನ್ಡಿಎ ಜೊತೆ ಬಿರುಕು ಮೂಡಿತು ಎಂಬ ಕಾರಣಕ್ಕೆ ಅಣ್ಣಾಮಲೈ ಅವರನ್ನು ಸೈಡ್ಲೈನ್ ಮಾಡಲಾಗಿತ್ತು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ತಮ್ಮ ತಂದೆಯ ಅನಾರೋಗ್ಯದ ಕಾರಣ ನೀಡಿ ಚುನಾವಣಾ ಉಸ್ತುವಾರಿಯಿಂದ ಹಿಂದೆ ಸರಿದಿದ್ದರು ಮತ್ತು ಸ್ಪರ್ಧಿಸಲು ನಿರಾಕರಿಸಿದ್ದರು.
ಐಪಿಎಸ್ ಅಧಿಕಾರಿಯಾಗಿ ರಾಜೀನಾಮೆ ಸಲ್ಲಿಕೆ ಮಾಡಿದಾಗಲೇ ನಟ ರಜನೀಕಾಂತ್ ಅವರನ್ನು ಭೇಟಿ ಮಾಡಿ ಅವರ ಪಕ್ಷ ಸೇರುವ ಆಸೆ ವ್ಯಕ್ತಪಡಿಸಿದ್ದರು. ಆದರೆ ರಜನಿಕಾಂತ್ ಪಕ್ಷ ಆರಂಭಿಸಿರಲಿಲ್ಲ.
ಈಗ ಕೆ ಅಣ್ಣಾಮಲೈಯವರ ಹೊಸ ನಡೆ ಏನಿರಬಹುದು ಎಂಬ ಕುತೂಹಲ ಮೂಡಿದೆ

