ಅದಾನಿ ಸಿಎಸ್ಆರ್ : 7,000 ವಿದ್ಯಾರ್ಥಿಗಳಿಗೆ ರೂ. 40 ಲಕ್ಷ ಮೌಲ್ಯದ ಶಾಲಾ ಕಿಟ್ ವಿತರಣೆ.
ಜಿಲ್ಲೆಯ 85 ಸರಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವು.
(Yelluru) ಎಲ್ಲೂರು: ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶೈಕ್ಷಣಿಕೆ ನೆರವು ಒದಗಿಸುವ ತನ್ನ ನಿರಂತರ ಬದ್ಧತೆಯನ್ನು ಮುಂದುವರಿಸಿರುವ ಅದಾನಿ ಸಮೂಹದ ಸಿಎಸ್ಆರ್ ವಿಭಾಗವಾದ ಅದಾನಿ ಫೌಂಡೇಶನ್ ಸಂಸ್ಥೆಯು, ಉಡುಪಿ ಜಿಲ್ಲೆಯ 85 ಸರಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ 7,000 ವಿದ್ಯಾರ್ಥಿಗಳಿಗೆ ರೂ. 40 ಲಕ್ಷ ಮೌಲ್ಯದ ಶಾಲಾ ಕಿಟ್, ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದೆ.
ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಪವರ್ ಲಿಮಿಟೆಡ್ – ಉಡುಪಿ ಥರ್ಮಲ್ ಪವರ್ ಪ್ಲ್ಯಾಂಟ್ (ಉಡುಪಿ ಟಿಪಿಪಿ) ವತಿಯಿಂದ ತನ್ನ ಸ್ಥಾವರದ ಪರಿಸರದಲ್ಲಿ ಕೈಗೊಳ್ಳಲಾಗುತ್ತಿರುವ ನಿರಂತರ ಸಿಎಸ್ಆರ್ ಚಟುವಟಿಕೆಗಳ ಭಾಗವಾಗಿ ಈ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗಿದೆ.
ಶಾಲಾ ಕಿಟ್ಗಳಲ್ಲಿ ಶಾಲಾ ಬ್ಯಾಗ್, ನೋಟ್ ಪುಸ್ತಕ, ಜಿಯೊಮೆಟ್ರಿ ಬಾಕ್ಸ್, ಕೊಡೆ ಸೇರಿದಂತ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸಲಾಗಿದೆ. ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಿದೆ.
ಗ್ರಾಮೀಣ ಪ್ರದೇಶದ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಆರ್ಥಿಕ ಸಮಸ್ಯೆಗಳು ಯಾವುದೇ ಮಗುವಿನ ಶಿಕ್ಷಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಈ ಸಿಎಸ್ಆರ್ ಚಟುವಟಿಕೆಯ ಪ್ರಮುಖ ಉದ್ದೇಶವಾಗಿದೆ. ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ಅದಾನಿ ಫೌಂಡೇಶನ್ ಇಂತಹ ಶಿಕ್ಷಣಪರ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವ ಮೂಲಕ ಪೋಷಕರ ಮೇಲಿನ ಆರ್ಥಿಕ ಹೊರೆಯನ್ನು ಸಹ ಕಡಿಮೆ ಮಾಡುವುದು, ಮಕ್ಕಳ ನಿಯಮಿತ ಶಾಲಾ ಹಾಜರಾತಿಯನ್ನು ಉತ್ತೇಜಿಸುವುದು ಹಾಗೂ ಅವರು ತಮ್ಮ ಶಿಕ್ಷಣವನ್ನು ಆತ್ಮವಿಶ್ವಾಸದಿಂದ ಮುಂದುವರಿಸಲು ಪ್ರೇರೇಪಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ.
ಪುಸ್ತಕ ವಿತರಣೆ ಸಮಯದಲ್ಲಿ ಮಾತನಾಡಿದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಕಿಶೋರ್ ಆಳ್ವ, “ಕರ್ನಾಟಕದ ಗ್ರಾಮೀಣ ಶಿಕ್ಷಣ ವ್ಯವಸ್ಥೆಯ ಬೆನ್ನಲುಬಾಗಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆರ್ಥಿಕವಾಗಿ ದುರ್ಬಲ ಕುಟುಂಬಗಳ ಸಾವಿರಾರು ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಈ ಶಾಲೆಗಳನ್ನೇ ಅವಲಂಬಿಸಿದ್ದಾರೆ. ನಾವು ಶಾಲಾ ಕಿಟ್ಗಳನ್ನು ವಿತರಿಸುವಾಗ ಕೇವಲ ನೋಟ್ ಪುಸ್ತಕಗಳು ಅಥವಾ ಶಾಲೆ ಬ್ಯಾಗ್ಗಳನ್ನು ನೀಡುತ್ತಿಲ್ಲ. ಮಕ್ಕಳಿಗೆ ಆತ್ಮವಿಶ್ವಾಸ, ಗೌರವ ಮತ್ತು ತಮ್ಮ ಶಿಕ್ಷಣವನ್ನು ಮುಂದುವರಿಸುವ ಪ್ರೋತ್ಸಾಹವನ್ನು ನೀಡುತ್ತಿದ್ದೇವೆ. ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ಮುಂದುವರಿಸಿಕೊಂದು ಬರುತ್ತಿರುವ ಈ ಕಾರ್ಯಕ್ರಮವು ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದ್ದು, ಅವರ ಶೈಕ್ಷಣಿಕ ಭವಿಷ್ಯಕ್ಕೆ ಬಲವಾದ ಅಡಿಪಾಯ ನಿರ್ಮಿಸಲು ಸಹಕಾರಿಯಾಗಿದೆ” ಎಂದರು.

