# Tags
#ರಾಜಕೀಯ

ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರಿಂದ ರಾಹೆ 169: ಕಾಮಗಾರಿ ಪ್ರಗತಿ ಪರಿಶೀಲನೆ.(Karkala MLA Sunil Kumar Review of work progress Of NH 169)

ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರಿಂದ ರಾಹೆ 169: ಕಾಮಗಾರಿ ಪ್ರಗತಿ ಪರಿಶೀಲನೆ.

ಕಾರ್ಕಳ ; ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ರವರು  ಸಾಣೂರು ಪುಲ್ಕೇರಿ ಬೈಪಾಸ್ ಬಳಿಯಿಂದ ಮುರತಂಗಡಿ ಪರಿಸರದ ಸಾಣೂರು ಪದವಿಪೂರ್ವ ಕಾಲೇಜುವರೆಗೆ ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸರ್ವಿಸ್ ರೋಡ್ ನಿರ್ಮಾಣ: ಫುಲ್ಕೇರಿ ಬೈಪಾಸ್ ವೃತ್ತದಿಂದ ಸಾಣೂರು ಶ್ರೀರಾಮ ಮಂದಿರದವರೆಗೆ ಎರಡು ಬದಿಗಳಲ್ಲಿ ಸರ್ವಿಸ್ ರೋಡ್ ನಿರ್ಮಾಣ ಮಾಡಿ, ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಮಹಮ್ಮದ್ ಅಜ್ಮಿಯವರಿಗೆ ಸೂಚನೆ ನೀಡಿದರು.

 ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಕಾಮಗಾರಿ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸುವುದಾಗಿ ಯೋಜನಾಧಿಕಾರಿ ಶಾಸಕರಿಗೆ ತಿಳಿಸಿದರು.

 ಚರಂಡಿ ವ್ಯವಸ್ಥೆ: ಫುಲ್ಕೇರಿ ಬೈಪಾಸ್ ಇಂದಿರಾನಗರಕ್ಕೆ ಹೋಗುವ ರಸ್ತೆಯ ಬಳಿ ಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಸ್ಥಳೀಯ ಪಂಚಾಯಿತಿ ಸದಸ್ಯರಾದ  ಸತೀಶ್ ರವರು ಶಾಸಕರಿಗೆ ಮನವಿ ಮಾಡಿದರು.

 ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳಿಗೆ ಸೂಚನೆ ನೀಡಿದ ಶಾಸಕರು, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಾಣ ಮಾಡಿಕೊಡುವಂತೆ ಸೂಚಿಸಿದರು.

 ಸಾಣೂರು ಯುವಕ ಮಂಡಲದ ಮೈದಾನದ ಅಂಚಿನಲ್ಲಿ ಮಣ್ಣು ಕುಸಿದಿರುವುದನ್ನು ಗಮನಿಸಿದ ಶಾಸಕರು ಕೂಡಲೇ ಗುಡ್ಡ ಕಡಿದಿರುವ ಜಾಗದ ಮಣ್ಣು ಇನ್ನಷ್ಟು ಕುಸಿದು ರಸ್ತೆಗೆ ಬೀಳದಂತೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವಂತೆ ಸೂಚಿಸಿದರು.

 ಶಾಶ್ವತ ತಡೆಗೋಡೆ ನಿರ್ಮಾಣ: ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿಯವರು ಕೂಡಲೇ ತಡೆ ಗೋಡೆ ನಿರ್ಮಾಣ ಮಾಡದಿದ್ದರೆ ರಸ್ತೆಯ ಅಂಚಿನಲ್ಲಿರುವ ಹೈ ಟೆನ್ಶನ್ ಟವರ್ ಮತ್ತು ಒಂದು ಲಕ್ಷ ಲೀಟರ್ ಸಾಮರ್ಥ್ಯದ ಎರಡು ಓವರ್ ಹೆಡ್ ಟ್ಯಾಂಕು ಗಳಿಗೂ ಅಪಾಯವಾಗುವ ಸಾಧ್ಯತೆ ಇದೆ ಎಂದು ಶಾಸಕರ ಗಮನಸೆ ಳೆದರು.

ಬದಲಿ ಕಟ್ಟಡ ನಿರ್ಮಾಣ: ಗುಡ್ಡ ಕಡಿದಿರುವುದರಿಂದ ಕುಸಿತದ ಭೀತಿಗೆ ಒಳಗಾಗಿದ್ದ ಪಶು ಚಿಕಿತ್ಸಾಲಯ ಕಟ್ಟಡವನ್ನು ಹೆದ್ದಾರಿ ಇಲಾಖೆಯವರು ತೆರವುಗೊಳಿಸಿದ್ದು, ಅದಕ್ಕೆ ಬದಲಿ ಕಟ್ಟಡವನ್ನು ನಿರ್ಮಾಣ ಮಾಡಿಕೊಡುವಂತೆ ಶಾಸಕರು ಸೂಚಿಸಿದರು.

 ಮಳೆ ನೀರು ಮನೆಗೆ ನುಗ್ಗದಂತೆ ವ್ಯವಸ್ಥೆ:

ಮುರತಂಗಡಿ ಪರಿಸರದಲ್ಲಿ ಶುಂಠಿ ಗುಡ್ಡೆ ಪ್ರಕೃತಿ ನ್ಯಾಷನಲ್ ಶಾಲೆಗೆ ಹೋಗುವ ಅಡ್ಡರಸ್ತೆಯ ಬದಿಯಲ್ಲಿ  ರತ್ನಾಕರ ಕಾಮತ್ ರವರ ಮನೆಯಿಂದ ಸಾಕಷ್ಟು ಎತ್ತರಕ್ಕೆ ಸರ್ವಿಸ್ ರೋಡ್ ನಿರ್ಮಾಣವಾಗಿದ್ದು, ಮಳೆ ಬಂದಾಗ ನೀರು ಮನೆಗೆ ನುಗ್ಗಿ ಈಗಾಗಲೇ ಬಹಳಷ್ಟು ತೊಂದರೆಯನ್ನು ಅನುಭವಿಸಿದ ಬಗ್ಗೆ ಶಾಸಕರಿಗೆ ಮನೆ ಮಂದಿ ಬೇಸರ ವ್ಯಕ್ತಪಡಿಸಿ, ಪರಿಸ್ಥಿತಿಯನ್ನು ವಿವರಿಸಿದರು.

 ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಜನರಲ್ ಮ್ಯಾನೇಜರ್  ವರದ ರಾವ್ ರವರಿಗೆ ಈ ಬಗ್ಗೆ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಯಾವುದೇ ಕಾರಣಕ್ಕೂ ಮಳೆಯ ನೀರು, ಮನೆಗೆ ನುಗ್ಗದಂತೆ ಸೂಕ್ತವಾದ ಡ್ರೈನೇಜ್ ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಿದರು.

 ಶಾಲಾ ರಸ್ತೆ ನಿರ್ಮಾಣ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಸಾಣೂರು ಪದವಿಪೂರ್ವ ಕಾಲೇಜಿಗೆ ಹೋಗುವ ರಸ್ತೆಯು ಕಿರಿದಾಗಿದ್ದು, ಹೊಂಡ ಗುಂಡಿಗಳಿಂದ ವಿದ್ಯಾರ್ಥಿಗಳಿಗೆ ನಡೆದಾಡಲು ಕಷ್ಟವಾಗುತ್ತಿರುವುದನ್ನು ಸ್ವತಃ ಶಾಸಕರು ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಮತ್ತು ದಿಲೀಪ್ ಬಿಲ್ಡ್ ಕಾಲ್ ಅಧಿಕಾರಿಗಳ ಗಮನ ಸೆಳೆದು ಆದಷ್ಟು ಶೀಘ್ರ ಹೊಸ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸೂಚಿಸಿದರು.

 ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ತೆರವುಗೊಳಿಸಿದ ಕಾಂಕ್ರೀಟ್ ಪ್ರವೇಶ ದ್ವಾರ ಮತ್ತು ಪ್ರಯಾಣಿಕರ ತಂಗುದಾಣವನ್ನು ಮರು ನಿರ್ಮಾಣ ಮಾಡಿಕೊಡುವಂತೆಯೂ ಸೂಚಿಸಿದರು.

 ಶಾಶ್ವತ ತಡೆಗೋಡೆ ನಿರ್ಮಾಣ: ಪದವಿಪೂರ್ವ ಕಾಲೇಜಿನ ಕಟ್ಟಡಕ್ಕೆ ತಾಗಿಯೇ ಗುಡ್ಡ ಕಡಿದಿರುವಲ್ಲಿ ಸುಭದ್ರವಾದ ಕಾಂಕ್ರೀಟ್ ತಡೆಗೋಡೆಯನ್ನು ರಚಿಸಿರುವ ಕಾಮಗಾರಿಯ ಬಗ್ಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ, ಅದರ ಎದುರು ಭಾಗದಲ್ಲಿರುವ ಗುಡ್ಡವನ್ನು ಮೆಟ್ಟಿಲುಗಳ ರೀತಿ ಕಡಿದಿರುವುದನ್ನು ಆಕ್ಷೇಪಿಸಿ, ತಾತ್ಕಾಲಿಕ ವ್ಯವಸ್ಥೆಯನ್ನು ಮಾಡದೆ ಅಲ್ಲಿಯೂ ಕೂಡ ಶಾಶ್ವತವಾದ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಾಣ ಮಾಡುವಂತೆ ಸೂಚಿಸಿದರು.

ಬ್ಲಿಂಕರ್ ಅಳವಡಿಕೆ: ರಸ್ತೆ ವಿಭಾಜಕಗಳ ಬಳಿ ಬ್ಲಿಂಕರ್ ಅಳವಡಿಸಿ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ರಾತ್ರಿ ವೇಳೆಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕಾಗಿ ಸೂಚಿಸಿದರು.

 ಬೀದಿ ದೀಪಗಳ ಮರುಸ್ಥಾಪನೆ: ಸರ್ವಿಸ್ ರೋಡ್ ನಿರ್ಮಾಣ ಕಾರ್ಯ ಸಂಪೂರ್ಣ ಗೊಂಡಿರುವಲ್ಲಿ ಬೀದಿ ದೀಪಗಳ ಅಳವಡಿಕೆ ಮಾಡಿ ರಾತ್ರಿ ವೇಳೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಶಾಸಕರು ಗುತ್ತಿಗೆದಾರ ಕಂಪನಿಗೆ ಸೂಚಿಸಿದರು.

 ಕುಡಿಯುವ ನೀರಿನ ಪೈಪ್‌ ಲೈನ್ ಕಾಮಗಾರಿ ವೇಳೆ ಕಡಿತಗೊಂಡರೆ ಕೂಡಲೇ ಸರಿಪಡಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಸಂಸ್ಥೆಯ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.

 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿ ಪರಿಶೀಲನೆ ಮತ್ತು ಕುಂದು ಕೊರತೆಗಳ ವಿಚಾರಣೆಯ ಸಂದರ್ಭದಲ್ಲಿ ಶಾಸಕರ ಜೊತೆಗೆ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯುವರಾಜ ಜೈನ್, ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು, ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್, ಪಂಚಾಯತ್ ಸದಸ್ಯರುಗಳಾದ ಕರುಣಾಕರ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರವೀಣ್ ಕೋಟ್ಯಾನ್, ಪ್ರಮುಖರಾದ ಅಶೋಕ್ ಶೆಟ್ಟಿ, ರತ್ನಾಕರ ಕಾಮತ್, ರಾಜೇಶ್,‌ ರೋಮನ್ ಪಿಂಟೋ, ಸತೀಶ್ ನಾಯಕ್, ರಮೇಶ್ ಸಾಲಿಯಾನ್, ಸಂತೋಷ್ ಸುವರ್ಣ, ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಕನ್ಸ್ಟ್ರಕ್ಷನ್ ಮ್ಯಾನೇಜರ್  ಬಾಲಾಜಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *