ಪಣಿಯೂರು – ಬೆಳಪು ರಸ್ತೆ ಅಗಲೀಕರಣ : ಸಂತ್ರಸ್ತರ ಸಭೆ (Widening of Paniyuru – Belapu : Meeting of victims)
ಪಣಿಯೂರು – ಬೆಳಪು ರಸ್ತೆ ಅಗಲೀಕರಣ : ಸಂತ್ರಸ್ತರ ಸಭೆ
(Belapu) ಬೆಳಪು: ಕಾಪು ತಾಲೂಕು ಬೆಳಪು ಗ್ರಾಮ ಈಗಾಗಲೇ ಕೈಗಾರಿಕೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಇದಕ್ಕೆ ಪೂರಕವಾಗಿ ಉಚ್ಚಿಲ-ಪಣಿಯೂರು ರಸ್ತೆ 9 ಮೀ ಅಗಲೀಕರಣಗೊಳಿಸಲಾಗಿದ್ದು, ಪಣಿಯೂರು ಬೆಳಪು ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಂತ್ರಸ್ತರ ಸಭೆ ನಡೆಸಲಾಯಿತು.
ಬೆಳಪು-ಪಣಿಯೂರು ರಸ್ತೆ ಅಭಿವೃದ್ಧಿಗೆ ಹಾಗೂ 7 ಮೀ. ಅಗಲೀಕರಣಗೊಳಿಸಿ ಚರಂಡಿ ನಿರ್ಮಿಸಲು ಕೆ.ಐ.ಎ.ಡಿ.ಬಿ ಅಧಿಕಾರಿಗಳು ಸುಮಾರು 6 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಗ್ರಾಮದ ಅನೇಕ ರೈತಾಪಿ ಜನರು ಭೂಮಿ ನೀಡಬೇಕಾಗಿದ್ದು, ಇದಕ್ಕೆ ಈಗಾಗಲೇ ಸರ್ವೆ ನಡೆಸಿ ಗಡಿ ಗುರುತು ಮಾಡಿ ರೈತರ ಬೆಳೆಗಳಿಗೆ, ತೆಂಗು, ಮರ, ಕಟ್ಟಡಗಳಿಗೆ ಹಾಗೂ ಈ ಹಿಂದೆ ನೀಡಿರುವ ರಸ್ತೆ ಸೇರಿ ಈಗಿನ ಭೂಸ್ವಾದೀನವನ್ನು ಸೇರಿಸಿ ಮಾರುಕಟ್ಟೆ ಧಾರಣೆಯ ಉತ್ತಮ ಬೆಲೆ ನೀಡುವಂತೆ ದೇವಿಪ್ರಸಾದ್ ಶೆಟ್ಟಿಯವರು ಕೆ.ಐ.ಎ.ಡಿ.ಬಿ ಅಧಿಕಾರಿಗಳಿಗೆ ತಿಳಿಸಿದರು.
ಸಂತ್ರಸ್ತರೆಲ್ಲರೂ ಗ್ರಾಮದ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಂತ್ರಸ್ತರು ದಾಖಲೆ ನೀಡಿದ ತಕ್ಷಣ ಪರಿಹಾರ ನೀಡುವುದಾಗಿ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ರಸ್ತೆ ಅಭಿವೃದ್ಧಿ ಸಂಸದರ ನಿಧಿಯಿಂದ : ಶೆಟ್ಟಿ
ಸದ್ರಿ ರಸ್ತೆ ಅಗಲೀಕರಣಗೊಳಿಸಿ ರೂ.೬.೦೦ ಕೋಟಿ ವೆಚ್ಚವನ್ನು ಸಣ್ಣ ಕೈಗಾರಿಕಾ ಮಾಲೀಕರು ಭರಿಸುವಂತೆ ತಿಳಿಸಿರುವ ಅಧಿಕಾರಿಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ದೇವಿಪ್ರಸಾದ್ ಶೆಟ್ಟಿಯವರು, ಈಗಾಗಲೇ ಕೈಗಾರಿಕೆಯ ಮಾಲಿಕರು ಕೊರೋನಾದಿಂದ ಕೈ ಸುಟ್ಟುಕೊಂಡು ಕಂಗಾಲಾಗಿದ್ದಾರೆ. ನಮ್ಮ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ನಾನು ಮನವಿ ಮಾಡಿದ್ದೇನೆ. ಅವರು ಸಡಕ್ ಯೋಜನೆ ಮೂಲಕ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಇದಕ್ಕೆ ಸ್ಪಂದಿಸಿದ್ದಾರೆಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಸಭೆಯಲ್ಲಿ ಭೂಸ್ವಾಧೀನಧಿಕಾರಿಯಾದ ಆಸೀಫ್, ಪಂಚಾಯತ್ ಸದಸ್ಯರಾದ ಪ್ರಕಾಶ್ ರಾವ್, ಶರತ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ ಡಿʼಸೋಜ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.