ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಕುಂದ್ರಾ ಕುಟುಂಬದ ಢಕ್ಕೆಬಲಿ ಸೇವೆ (Bollywood actress Shilpa Shetty Kundra’s family performs Dhakkebali Seva at Padubidri Sri Khadgeshwari Brahmasthan)

ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಕುಂದ್ರಾ ಕುಟುಂಬದ ಢಕ್ಕೆಬಲಿ ಸೇವೆ
(Padubidri) ಪಡುಬಿದ್ರಿ: ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದ್ವೈವಾರ್ಷಿಕವಾಗಿ ಜರಗುತ್ತಿರುವ ಢಕ್ಕೆಬಲಿ ಸೇವೆಯ ಅಂಗವಾಗಿ ಶುಕ್ರವಾರ ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಕುಂದ್ರಾ ಕುಟುಂಬದ ವತಿಯಿಂದ ಜರಗುವ ಢಕ್ಕೆಬಲಿ ಸೇವೆಯ ಪೂರ್ವಭಾವಿಯಾಗಿ ನಡೆಯುವ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಖಡ್ಗೇಶ್ವರಿ ಜ್ಞಾನ ಮಂದಿರದಿಂದ ಬ್ರಹ್ಮಸ್ಥಾನದವರೆಗೆ ನಡೆಯಿತು.
ಇಂದು ಬೆಳಿಗ್ಗೆ ಇಲ್ಲಿನ ಬಯಲು ಆಲಯ ಶ್ರೀ ಬ್ರಹ್ಮಸ್ಥಾನಕ್ಕೆ ತಮ್ಮ ತಾಯಿಯೊಂದಿಗೆ ಆಗಮಿಸಿದ ಶಿಲ್ಪಾ ಶೆಟ್ಟಿ ಅವರು ಇಲ್ಲಿ ನಡೆದಿದ್ದ ಪಂಚಾಮೃತ ಅಭಿಷೇಕದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಮಧ್ಯಾಹ್ನದ ವೇಳೆ ಶ್ರೀ ಖಡ್ಗೇಶ್ವರೀ ಜ್ಞಾನಮಂದಿರದಲ್ಲಿನ ಬ್ರಾಹ್ಮಣ ಸುವಾಸಿನೀ ಆರಾಧನೆ, ಅನ್ನ ಸಂತರ್ಪಣೆ, ಶ್ರೀಕಾಂತ್ ಆರ್. ಆಚಾರ್ಯ ಅವರ ವೇಣುವಾದನ ಸಂಧ್ರಭದಲ್ಲಿ ತಮ್ಮ ತಂಗಿ ಸಿನಿ ತಾರೆ ಶಮಿತಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ಹಾಗೂ ಈರ್ವರು ಪುಟ್ಟ ಮಕ್ಕಳೊಂದಿಗೆ ಶಿಲ್ಪಾ ಶೆಟ್ಟಿ ಭಾಗಿಯಾದರು.
ಸಂಜೆಯ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಶಿಲ್ಪಾ ಅವರ ಪತಿ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಕುಂದ್ರಾ, ತಾಯಿ ಸುನಂದಾ ಶೆಟ್ಟಿ, ತಂಗಿ ಶಮಿತಾ ಶೆಟ್ಟಿ, ಧನಂಜಯ ಶೆಟ್ಟಿ, ರವಿ ಕೋಟ್ಯಾನ್ ನ್ಯಾಯವಾದಿ, ಉದಯ ಶೆಟ್ಟಿ ನಯತ್, ಪ್ರಶಾಂತ್ ಶೆಟ್ಟಿ ನಯತ್, ಹಿರಿಯರಾದ ಸುವರ್ಣ ಬಾಬ ಬೊವಾಯಿ ಮುಂಬಯಿ ಹಾಗೂ ಕುಟುಂಬಿಕರೊಂದಿಗೆ ವನದುರ್ಗಾ ಟ್ರಸ್ಟ್ ಅಧ್ಯಕ್ಷ, ಗುರಿಕಾರ ಕೊರ್ನಾಯ ಪದ್ಮನಾಭ ರಾವ್, ಕೊರ್ನಾಯ ಗಿರೀಶ್ ರಾವ್, ಬಾಲಪ್ಪ ಗುರಿಕಾರ ನಟರಾಜ ರಾವ್ ಪಿ. ಎಸ್., ಟ್ರಸ್ಟಿ ಶ್ರೀನಿವಾಸ ರಾವ್, ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು, ಭಜಕರು ಭಾಗವಹಿಸಿದ್ದರು.