ಶಿಕ್ಷಕರನ್ನೇ ನೇಮಕ ಮಾಡದೆ ಕನ್ನಡ ಶಾಲೆ, ಭಾಷೆ ಉಳಿಸುವುದು ಹೇಗೆ? – ಶ್ರೀಹರಿ ಆಸ್ರಣ್ಣ (How to save Kannada schools and language without appointing teachers? – Srihari Asranna)

ಶಿಕ್ಷಕರನ್ನೇ ನೇಮಕ ಮಾಡದೆ ಕನ್ನಡ ಶಾಲೆ, ಭಾಷೆ ಉಳಿಸುವುದು ಹೇಗೆ? – ಶ್ರೀಹರಿ ಆಸ್ರಣ್ಣ
ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ (Closing of Mulki Taluk Kannada Sahitya Sammelana)
(Mulki) ಮೂಲ್ಕಿ : ಹೋರಾಟದಿಂದಲಷ್ಟೇ ಕನ್ನಡವನ್ನು ಉಳಿಸುವುದಲ್ಲ. ಮಾತನಾಡುವ, ಓದುವ, ಬರೆಯುವ, ಬಳಸುವ ಮೂಲಕ ಶುದ್ಧ ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ಕಟೀಲು ದೇಗುಲದ ಅರ್ಚಕರಾದ ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಐಕಳ ಪೊಂಪೈ ಕಾಲೇಜಿನಲ್ಲಿ ನಡೆದ ಮೂಲ್ಕಿ ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಹಿಂದೆ ಐದಾರನೆಯ ತರಗತಿಗಳಲ್ಲೇ ಹಳೆಗನ್ನಡದ ಪಾಠಗಳು ಪಂಪ, ರನ್ನನ ಕಾವ್ಯಗಳು ಇದ್ದವು. ಈಗ ಪದವಿಪೂರ್ವ, ಪದವಿ ತರಗತಿಗಳಲ್ಲೂ ಇಲ್ಲದ ಸ್ಥಿತಿ ಇದೆ. ಕುಮಾರವ್ಯಾಸನ ಭಾರತ, ಗದಾಯುದ್ಧ, ಮುದ್ದಣ ಕಾವ್ಯಗಳನ್ನೆಲ್ಲ ಈಗಿನ ಮಕ್ಕಳು ಓದುವುದು ಹೇಗೆ ಎಂದು ಪ್ರಶ್ನಿಸಿದರು.
2000 ನೆಯ ಇಸವಿಯಿಂದ ಅನುದಾನಿತ ಕನ್ನಡ ಶಾಲೆಗಳಿಗೆ ಒಬ್ಬನೇ ಒಬ್ಬ ಕನ್ನಡ ಶಿಕ್ಷಕನನ್ನು ನೇಮಕ ಮಾಡಿಲ್ಲ. ಇನ್ನು ಕನ್ನಡ ಶಾಲೆ, ಭಾಷೆ ಉಳಿಸುವುದು ಹೇಗೆ? ಪ್ರಾಣವ ಬಿಟ್ಟೆವು, ಕನ್ನಡ ಬಿಡವೆಂಬ ಹೋರಾಟಕ್ಕಿಂತ ಶುದ್ಧಕನ್ನಡ ಬಳಸೋಣ. ವ್ಯಾಕರಣದಲ್ಲಿ ಅಬದ್ದ ಪದಗಳ ಬಳಕೆಯಾಗುತ್ತಿದೆ. ಮಾರ್ಚ್ 25ಕ್ಕೆ ಪರೀಕ್ಷೆ ಮುಗಿದರೂ ಎಪ್ರಿಲ್ 10ರವರೆಗೆ ಶಾಲೆ ಯಾಕೆ ಇರುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಕನ್ನಡದ ಕಂಪು ಎಲ್ಲರಿಗೂ ಸಿಕ್ಕಾಗ, ಕನ್ನಡದ ಹೃದಯಗಳಿಂದ ಕನ್ನಡ ಉಳಿದೀತು ಎಂದರು.
ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್. ಮಾತನಾಡಿ, ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಆಸಕ್ತಿ ಬೆಳೆಸುವಲ್ಲಿ ಈ ಸಮ್ಮೇಳನದಲ್ಲಿ ಪ್ರಯತ್ನ ನಡೆದಿದೆ. ನಾನು ಮೂರು ದಶಕಗಳ ಕಾಲ ಪಾಠ ಮಾಡಿದ ಶಾಲೆಯಲ್ಲೇ ನಡೆದ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸುವ ಸೌಭಾಗ್ಯ ದೊರಕಿದೆ. ವೈಭವದಿಂದ ನಡೆದ ಈ ಸಮ್ಮೇಳನ ಯಶಸ್ವಿಯಾಗಿದೆ ಎಂದರು.
ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್ ಅವರನ್ನು ಗೌರವಿಸಲಾಯಿತು. ವಿವಿಧ ಸಾಹಿತ್ಯ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.
ದಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಸುಧಾಕರ ಶೆಟ್ಟಿ, ಡಾ. ಪ್ರಕಾಶ್ ನಂಬಿಯಾರ್, ಪೊಂಪೈ ಕಾಲೇಜು ಪ್ರಾಂಶುಪಾಲ, ಸಮ್ಮೇಳನ ಸಂಚಾಲಕ ಡಾ. ಪುರುಷೋತ್ತಮ ಕೆ.ವಿ., ಪ.ಪೂ. ಕಾಲೇಜು ಪ್ರಾಂಶುಪಾಲ, ಡೆಸ್ಮಂಡ್ ಡಿಮೆಲ್ಲೋ, ಕಸಾಪ ಕೇಂದ್ರೀಯ ಸಮಿತಿಯ ಡಾ. ಮಾಧವ ಎಂ. ಕೆ., ಸನತ್ಕುಮಾರ ಜೈನ್, ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿಗಳಾದ ವೀಣಾ ಶಶಿಧರ್, ಹೆರಿಕ್ ಪಾಯಸ್, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಸಮ್ಮೇಳನ ಸಮಿತಿಯ ಅಧ್ಯಕ್ಷ ಪೃಥ್ವಿರಾಜ್ ಆಚಾರ್ಯ, ಕಾರ್ಯದರ್ಶಿ ಹಿಲ್ಡಾ ಡಿಸೋಜ ಮತ್ತಿತರರಿದ್ದರು.
ಪ್ರಕಾಶ್ ಆಚಾರ್ ನಿರೂಪಿಸಿದರು.